ಹಾಸನ: ಅತ್ಯಾಚಾರ ಕುರಿತು ಹೇಳಿಕೆ ನೀಡಿರುವ ಕಾಂಗ್ರೆಸ್ ಶಾಸಕ ಕೆ.ಆರ್.ರಮೇಶ್ ಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ಮಹಿಳಾ ಘಟಕದ ಕಾರ್ಯಕರ್ತರು ನಗರದ ಎಂ.ಜಿ.ರಸ್ತೆ ಗಾಂಧೀಜಿ ಪ್ರತಿಮೆ ಎದುರು ಶನಿವಾರ ಪ್ರತಿಭಟನೆ ನಡೆಸಿದರು.
ವಿಧಾನಸಭೆಯಲ್ಲಿ ಮಹಿಳೆಯರ ಘನತೆಗೆ ಧಕ್ಕೆ ಉಂಟಾಗುವ ರೀತಿ ಮಾತನಾಡಿರುವುದುನೋವು ತಂದಿದೆ. ಹೇಳಿಕೆಯು ಅವರ ಸಂಸ್ಕೃತಿಯನ್ನು ತೋರುತ್ತದೆ. ಮಹಿಳೆಯರ ಕುರಿತ ದೃಷ್ಟಿಕೋನ ಬದಲಾಗಬೇಕು. ಸಮಾಜದಲ್ಲಿ ಇನ್ನಷ್ಟು ಸಂವೇದನಾ ಪ್ರಜ್ಞೆ ಮೂಡಬೇಕು ಎಂದು ಅಭಿಪ್ರಾಯಪಟ್ಟರು.
ನಗರ ಮಂಡಲ ಉಪಾಧ್ಯಕ್ಷೆ ವೇದಾವತಿ ಮಾತನಾಡಿ, ‘ರಾಜಕೀಯ ಅನುಭವ ಹೊಂದಿರುವ ರಮೇಶ್ ಕುಮಾರ್ ಮಹಿಳೆಯರ ಘನತೆಗೆ ಕುಂದು ತರುವ ಹೇಳಿಕೆ ನೀಡಿದ್ದಾರೆ. ಇದರಿಂದ ಮಹಿಳೆಯರಿಗೆ ನೋವಾಗುತ್ತಾ ಇಲ್ಲವೋ ಎಂಬುದು ಅವರ ಕುಟುಂಬದ ಸದಸ್ಯರನ್ನೇ ಕೇಳಿ ತಿಳಿದುಕೊಳ್ಳಲಿ. ಅತ್ಯಾಚಾರ ಅತ್ಯಂತ ಸೂಕ್ಷ್ಮ ವಿಚಾರ, ಇದನ್ನು ಮಾತನಾಡುವುದು ಒಳ್ಳೆಯದಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
‘ಸ್ವೀಕರ್ ತಕ್ಷಣವೇ ಅವರಿಗೆ ನೋಟಿಸ್ ಜಾರಿ ಮಾಡಬೇಕಿತ್ತು. ಅವರು ಕೂಡ ನಿರ್ಲಕ್ಷ್ಯ ತೋರಿದ್ದಾರೆ. ದೇಶದಲ್ಲಿಯೇ ಈ ವಿಚಾರ ಚರ್ಚೆ ಆಗುತ್ತಿದೆ. ಹೇಳಿಕೆ ನೀಡಿ ನಂತರ ಕ್ಷಮೆ ಕೇಳುವುದರಲ್ಲಿ ಅರ್ಥವಿಲ್ಲ. ರಾಜ್ಯದ ಎಲ್ಲ ಜನಪ್ರತಿನಿಧಿಗಳು ಇದನ್ನು ಖಂಡಿಸಬೇಕು. ನೈತಿನ ಹೊಣೆ ಹೊತ್ತು ರಮೇಶ್ ಕುಮಾರ್ ರಾಜೀನಾಮೆ ನೀಡಬೇಕು. ಇಲ್ಲವಾದರೆ ರಾಜ್ಯದಾದ್ಯಂತ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷರಾದ ರತ್ನ ಪ್ರಕಾಶ್, ರಾಜ್ಯಕೋಶ ಅಧ್ಯಕ್ಷರಾದ ಸುಶೀಲಾ ಅಣ್ಣಪ್ಪ, ನಗರ ಮಂಡಲ ಅಧ್ಯಕ್ಷರಾದ ಅನಿತಾ ಲೋಕೇಶ್, ಮುಖಂಡರಾದ ಶೇಷಮ್ಮ, ನಗರ ಮಂಡಲ ಅಧ್ಯಕ್ಷ ವೇಣುಗೋಪಾಲ್, ಉಪಾಧ್ಯಕ್ಷ ಚಂದ್ರಶೇಖರ್, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮುರಳಿ ಇದ್ದರು.