ಹಾಸನ: ‘ಹಿಂದುಳಿದ ವರ್ಗಗಳಿಗೆ ಸರ್ಕಾರ ರೂಪಿಸಿರುವ ಯೋಜನೆಗಳ ಸೌಲಭ್ಯವನ್ನು ಫಲಾನುಭವಿಗಳಿಗೆ ಸಕಾಲದಲ್ಲಿ ತಲುಪಿಸಬೇಕು’ ಎಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ಧಿಗೆ ರೂಪಿಸಿ ರುವ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲನೆ ಸಭೆ ನಡೆಸಿ ಅವರು ಮಾತನಾಡಿದರು.
‘ಬಡವರನ್ನು ಆರ್ಥಿಕ,ಸಾಮಾಜಿಕ, ಶೈಕ್ಷಣಿಕ ಪ್ರಗತಿಯತ್ತ ಕೊಂಡೊಯ್ಯಲು ಶ್ರಮಿಸಬೇಕು. ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯಬೇಕು. ಹಾಸ್ಟೆಲ್ಗಳಲ್ಲಿ ಮೂಲಸೌಕರ್ಯ ಒದಗಿಸಬೇಕು. ಶಿಕ್ಷಣದ ಜೊತೆಗೆ ಯುವ ಸಮುದಾಯದ ಕೌಶಲಭಿವೃದ್ದಿಗೂ ಆದ್ಯತೆ ನೀಡಬೇಕು’ ಎಂದು ಹೇಳಿದರು.
‘ಗಂಗಾ ಕಲ್ಯಾಣ ಯೋಜನೆ ಪರಿಣಾಮಕಾರಿ ಅನುಷ್ಠಾನವಾಗಬೇಕು. ನೀರು ಸಮರ್ಪಕವಾಗಿ ಬಂದಿರುವು ದನ್ನು ಖಾತರಿ ಪಡಿಸಿಕೊಂಡು ಬಿಲ್ ಪಾವತಿಸಬೇಕು. ಕೊಳವೆ ಬಾವಿ ಮತ್ತು ಹಾಸ್ಟೆಲ್ಗಳಿಗೆ ಆದ್ಯತೆ ಮೇರೆಗೆ ವಿದ್ಯುತ್ ಸಂಪರ್ಕ ಒದಗಿಸಬೇಕು’ ಎಂದು ಸೂಚಿಸಿದರು.
‘ಬಹುಗುತ್ತಿಗೆ ಮೇರೆಗೆ ಕೆಲಸ ಮಾಡುವ ಸಿಬ್ಬಂದಿಗೆ ಪಿ.ಎಫ್ - ಇ.ಎಸ್.ಐ ಹಣ ದೊರೆಯುತ್ತಿದೆಯೇ, ರಜೆ ನೀಡಲಾಗುತ್ತಿದೆಯೇ ಎಂಬುದನ್ನು ಆರೋಗ್ಯ ಇಲಾಖಾ ಅಧಿಕಾರಿಗಳು ಖಾತರಿಪಡಿಸಬೇಕು’ ಎಂದರು.
‘ನಿಗಮಗಳ ಸಂಖ್ಯೆ ಹೆಚ್ಚಾಗಿರುವು ದರಿಂದ ಯೋಜನೆ ಅನುಷ್ಠಾನ ವೆಚ್ಚಕ್ಕಿಂತ ಆಡಳಿತಾತ್ಮಕ ವೆಚ್ಚ ಹೆಚ್ಚಾಗದಂತೆ ಗಮನಿಸಬೇಕು. ಅಲೆಮಾರಿ - ಅರೆ ಅಲೆಮಾರಿಗಳ ಜೀವನ ಮಟ್ಟ ಸುಧಾರಣೆಗೆ ಶ್ರಮಿಸಬೇಕು’ ಎಂದರು.
‘ಸಕಲೇಶಪುರ ತಾಲ್ಲೂಕಿನಲ್ಲಿ ದೇವರ ಮಕ್ಕಳು, ದಿವ್ರ ಮಕ್ಕಳು, ಮಡಿ ಒಕ್ಕಲಿಗರು ಎಂಬ ವರ್ಗಗಳಿದ್ದು, ಕೆಲವರು 30 ಹಾಗೂ ಕೆಲವರು 20 ನಲ್ಲಿ ಜಾತಿ ಪ್ರಮಾಣ ಪತ್ರಪಡೆದಿದ್ದಾರೆ. ಇವರು ಯಾವ ಸಮುದಾಯಕ್ಕೆ ಸೇರುತ್ತಾರೆ ಎಂಬುದನ್ನು ಖಾತರಿ ಪಡಿಸಿಕೊಳ್ಳಬೇಕು. ಆಯೋಗವು ಸರಿಯಾಗಿ ಅಧ್ಯಯನ ಮಾಡಿ ಸರ್ಕಾರಕ್ಕೆ ವರದಿ ನೀಡಬೇಕಿದೆ’ ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಾಂತ ರಾಜು, ಆಯೋಗದ ಸದಸ್ಯರಾದ ಕಲ್ಯಾಣ್ ಕುಮಾರ್, ಶಾರದ ನಾಯ್ಕ್, ಅರುಣ್ ಕುಮಾರ್, ಸುವರ್ಣ, ರಾಜಶೇಖರ್, ಉಪವಿಭಾಗಾಧಿಕಾರಿ ಬಿ.ಎ.ಜಗದೀಶ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಚಂದ್ರಶೇಖರ್, ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆ ಅಧಿಕಾರಿ ಲಮಾಣಿ, ವಾರ್ತಾಧಿಕಾರಿ ವಿನೋದ್ ಚಂದ್ರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.