ಆಲೂರು: ಗುರುವಾರದಿಂದ ಆರಂಭವಾದ ಪುಂಡಾನೆಗಳ ಹಿಡಿಯುವ ಕಾರ್ಯಾಚರಣೆ ಶುಕ್ರವಾರವೂ ಮುಂದುವರಿಯಿತು.
ಘಾಸಿಗೊಂಡ ಕಾಡಾನೆಗಳ ಗುಂಪು ದೊಡ್ಡಬೆಟ್ಟದಿಂದ ಬೋಸ್ಮಾನಹಳ್ಳಿ ಕಾಡೊಳಗೆ ಹೋಗಿವೆ. ಸಾಕಾನೆಗಳ ಮೂಲಕ ಮಾವುತ ಹಾಗೂ ವೈದ್ಯರು ಕಾಡಾನೊಳಗೆ ಹೋಗಿದ್ದರು. ಶುಕ್ರವಾರ ಮಧ್ಯಾಹ್ನ ಹೆಣ್ಣಾನೆಯೊಂದಕ್ಕೆ ಶಾರ್ಪ್ ಶೂಟರ್ ವೆಂಕಟೇಶ್ ರೈಫಲ್ ಮೂಲಕ ಅರಿವಳಿಕೆ ಮದ್ದು ಇಂಜೆಕ್ಟ್ ಮಾಡಿದರು.
ಸಾಕಾಣೆ ಸಹಕಾರದಿಂದ ಹೆಣ್ಣಾನೆಗೆ ಮರು ರೇಡಿಯೊ ಕಾಲರ್ ಅಳವಡಿಸಿ ಪುನಃ ಕಾಡಿಗೆ ಬಿಡಲಾಯಿತು. ಉಳಿದೆರಡು ಹೆಣ್ಣಾನೆಗಳನ್ನು ಹಿಡಿದು ರೇಡಿಯೊ ಕಾಲರ್ ಅಳವಡಿಸಿ ಪುಂಡಾನೆ ಸೆರೆ ಹಿಡಿಯಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಆನೆಗಳನ್ನು ಹಿಡಿಯುವ ಕಾರ್ಯಾಚರಣೆ ಆರಂಭವಾಗಿರುವುದರಿಂದ ಕಾಡಾನೆಗಳು ಘಾಸಿಯಾಗಿವೆ. ಆದ್ದರಿಂದ ಮಾವುತರು ಮಾತ್ರ ಸಾಕಿರುವ ಆನೆಗಳೊಂದಿಗೆ ಕಾಡೊಳಗೆ ಪ್ರವೇಶಿಸಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.