ಹಾಸನ: ನಗರಸಭೆ ವಾರ್ಡ್ ನಂ.1ರ ವ್ಯಾಪ್ತಿಯಲ್ಲಿರುವ ರಾಜಘಟ್ಟದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದತ್ತು ಪಡೆದು ಅಭಿವೃದ್ಧಿ ಪಡಿಸಲಾಗುವುದು ಎಂದು ಉಪವಿಭಾಗಾಧಿಕಾರಿ ಎಚ್.ಎಲ್.ನಾಗರಾಜ್ ಹೇಳಿದರು.
ಶಾಲಾ ದಾಖಲಾತಿ ಅಂಗವಾಗಿ ರಾಜಘಟ್ಟದಲ್ಲಿ ಮಕ್ಕಳು, ಶಿಕ್ಷಕರೊಂದಿಗೆ ಜಾಥಾ ನಡೆಸಿದ ಬಳಿಕ ಮಾತನಾಡಿದರು.
ಪ್ರಸಕ್ತ ವರ್ಷದಿಂದಲೇ ‘ಮಕ್ಕಳ ಮನೆ’ ತೆರೆದು ಎಲ್ಕೆಜಿ, ಯುಕೆಜಿ ಆರಂಭಿಸಲಾಗುವುದು. ಒಂದನೇ ತರಗತಿಯಿಂದ ಯೋಗ, ಕರಾಟೆ, ಸಂಗೀತ ಶಿಕ್ಷಣಕ್ಕೆ ವಿಶೇಷ ಆದ್ಯತೆ ನೀಡಲಾಗುವುದು ಎಂದರು.
ಈಗಾಗಲೇ ಶಾಲೆಯ ಅಭಿವೃದ್ಧಿಗೆ ಹಿರಿಯ ವಿದ್ಯಾರ್ಥಿಗಳು, ಸ್ಥಳೀಯರು ₹ 10 ಸಾವಿರ ದೇಣಿಗೆ ನೀಡಿದ್ದಾರೆ. ಒಂದನೇ ವಾರ್ಡ್ ಸದಸ್ಯ ರಕ್ಷಿತ್ ಹಾಗೂ ಮೂರನೇ ವಾರ್ಡ್ ಸದಸ್ಯ ದಯಾನಂದ ಸಹ ಇದೇ ಶಾಲೆಯಲ್ಲಿ ವ್ಯಾಸಂಗ ಮಾಡಿರುವುದರಿಂದ ಆರ್ಥಿಕ ನೆರವು ನೀಡುವ ಭರವಸೆ ನೀಡಿದ್ದಾರೆ ಎಂದು ನುಡಿದರು.
ಈ ಶಾಲೆ ಅಭಿವೃದ್ಧಿಪಡಿಸಿದ ಬಳಿಕ ನಗರದ ಎಲ್ಲಾ ಸರ್ಕಾರಿ ಶಾಲೆಗಳನ್ನು ಹಳೆಯ ವಿದ್ಯಾರ್ಥಿಗಳು ಹಾಗೂ ಸ್ಥಳೀಯರ ನೆರವಿನಿಂದ ಅಭಿವೃದ್ಧಿಪಡಿಸುವ ಮೂಲಕ ಖಾಸಗಿ ಶಾಲೆಗಳ ಹಾವಳಿ ತಪ್ಪಿಸಲು ಪ್ರಯತ್ನಿಸಲಾಗುವುದು ಎಂದು ವಿವರಿಸಿದರು.
ಸರ್ಕಾರಿ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸುವಂತೆ ಜಾಥಾ ನಡೆಸಿ ಪೋಷಕರಿಗೆ ಮನವಿ ಮಾಡಲಾಯಿತು.
ನಗರಸಭೆ ಸದಸ್ಯರಾದ ರಕ್ಷಿತ್, ದಯಾನಂದ್, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಮಹಾಂತಪ್ಪ, ಮುಖ್ಯ ಶಿಕ್ಷಕಿ, ಶಿಕ್ಷಕರು, ಅಂಗನವಾಡಿ ಶಿಕ್ಷಕಿ ಇದ್ದರು.