ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಕ್ಕೆ ರಾಜ್‌ಕುಮಾರ್‌, ದೇಶಕ್ಕೆ ಮೋದಿಯೇ ಶಕ್ತಿ: ಚಿತ್ರನಟಿ ತಾರಾ

’ವರಿಷ್ಠರು ಸೂಚಿಸಿದರೆ ಸುಮಲತಾ ಪರ ಪ್ರಚಾರ ಮಾಡುವೆ’
Last Updated 1 ಏಪ್ರಿಲ್ 2019, 13:14 IST
ಅಕ್ಷರ ಗಾತ್ರ

ಹಾಸನ : ಕರ್ನಾಟಕದಲ್ಲಿ ಡಾ.ರಾಜ್ ಕುಮಾರ್ ಹೇಗೆ ಒಂದು ಶಕ್ತಿಯೋ? ಹಾಗೆಯೇ ದೇಶದಲ್ಲಿ ಪ್ರಧಾನಿ ಮೋದಿಯೂ ಒಂದು ಶಕ್ತಿ. ಆ ಕಾರಣಕ್ಕೆ ಮೋದಿ ಹೆಸರನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದೇವೆ ಎಂದು ಚಿತ್ರನಟಿ ತಾರಾ ಹೇಳಿದರು.

ನಗರದಲ್ಲಿ ಮಾತನಾಡಿದ ಅವರು, ರಾಜ್ ಕುಮಾರ್ ಅವರಿಗೆ ಎಲ್ಲಾ ಸಂದರ್ಭಗಳಲ್ಲೂ ಜನಸಂಘಟಿಸುವ ಶಕ್ತಿ ಇತ್ತು. ಅಂಥದೇ ಶಕ್ತಿ ಮೋದಿ ಅವರಿಗಿದೆ. ಮೋದಿ ಹೆಸರಲ್ಲೇ ಒಂದು ಮೋಡಿ ಇದೆ. ಆ ಕಾರಣಕ್ಕೆ ರಾಜ್ಯದಲ್ಲಿ ಹಲವು ಬಿಜೆಪಿ ನಾಯಕರಿದ್ದರೂ, ನಾವು ಮೋದಿ ಹೆಸರನ್ನು ಬಳಸಿಕೊಳ್ಳುತ್ತಿದ್ದೇವೆ ಎಂದು ಸಮರ್ಥಿಸಿಕೊಂಡರು.

ಇದೇ ವೇಳೆ ‘ನನ್ನದು ಸ್ವಾತಿ ನಕ್ಷತ್ರ. ಯಾರು ಏನೇ ಮಾಡಿದರೂ ಅವರಿಗೇ ರಿವರ್ಸ್ ಆಗಲಿದೆ’ ಎಂಬ ಸಚಿವ ಎಚ್.ಡಿ.ರೇವಣ್ಣ ಹೇಳಿಕೆಗೆ ಟಾಂಗ್ ಕೊಟ್ಟ ತಾರಾ, ‘ನನ್ನದೂ ಶತಭಿಷ ನಕ್ಷತ್ರ. ನನ್ನ ಹಾಗೂ ಭಾರತಕ್ಕೆ ನಕ್ಷತ್ರವಾಗಿರುವ ಬಿಜೆಪಿಯನ್ನೂ ಯಾರೂ ಏನೂ ಮಾಡಲು ಆಗುವುದಿಲ್ಲ’ ಎಂದು ಹೆಸರು ಹೇಳದೆಯೇ ತಿರುಗೇಟು ನೀಡಿದರು.

ಹಾಸನದಲ್ಲಿ ಈ ಬಾರಿ ಬದಲಾವಣೆ ಗಾಳಿ ಬೀಸಲಿದ್ದು, ನಮ್ಮ ಅಭ್ಯರ್ಥಿ ಎ.ಮಂಜು ಗೆಲುವು ಸಾಧಿಸಲಿದ್ದಾರೆ. ಮೋದಿ ಅಲೆ ಕಡಿಮೆಯಾಗಿದೆ ಎನ್ನುವುದು ಸುಳ್ಳು. ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಐದು ವರ್ಷ ಸಾಲದು. ಮತ್ತೊಂದು ಅವಧಿ ಬೇಕು‌. ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪಕ್ಷದ ವರಿಷ್ಠರು ಸೂಚನೆ ಕೊಟ್ಟರೆ ಮಂಡ್ಯಕ್ಕೂ ಹೋಗಿ ಸುಮಲತಾ ಪರ ಪ್ರಚಾರ ಮಾಡುವೆ. ಸುಮಲತಾ-ನಿಖಿಲ್ ಇಬ್ಬರೂ ಸಿನಿಮಾ ಕ್ಷೇತ್ರದವರೇ ಎಂದರು.

ಸದ್ಯ ಮಂಡದಲ್ಲಿ ನಡೆಯುತ್ತಿರುವ ಬೆಳವಣಿಗೆ ಬಗ್ಗೆ ಹಾಗೂ ಅನಂತಕುಮಾರ್‌ ಪತ್ನಿಗೆ ಟಿಕೆಟ್‌ ಕೈ ತಪ್ಪಿರುವ ಕುರಿತು
ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT