ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್‌ ಪ್ರಿಯೆ ಈ ಖಳನಟಿ

Last Updated 8 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಎತ್ತರದ ವ್ಯಕ್ತಿತ್ವ. ಹಾಲುಬಿಳುಪು ಬಣ್ಣ. ಕಂಡ ಕ್ಷಣ ಸೆಳೆಯುವ ಕಣ್ಣುಗಳು. ಒಬ್ಬ ನಟಿಗೆ ಇರಬೇಕಾದ ಎಲ್ಲಾ ಲಕ್ಷಣಗಳು ಇವರಲ್ಲಿವೆ. ಆದರೂ, ಪ್ರೇಕ್ಷಕರು ಇವರನ್ನು ಮೆಚ್ಚಿದ್ದು ಖಳನಾಯಕಿ ಪಾತ್ರಗಳ ಮೂಲಕವೇ. ‘ಚಂದ್ರಾ’ ಎಂಬ ಪಾತ್ರದ ಮೂಲಕ ಜನಮಾನಸದಲ್ಲಿ ಚಂದ್ರನಂತೆ ಬೆಳಗಿದವರು ವೀಣಾ ಪೊನ್ನಪ್ಪ.

ಮಡಿಕೇರಿ ಮೂಲದ ಅವರು ಸದ್ಯ ‘ಪುಟ್ಮಲ್ಲಿ’ ಧಾರಾವಾಹಿಯಲ್ಲಿ ಮುಖ್ಯ ಖಳನಾಯಕಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಟನೆಯ ಎಳೆ ಇಲ್ಲದ ಈ ಸುಂದರಿ ನಟನಾ ಕ್ಷೇತ್ರಕ್ಕೆ ಕಾಲಿರಿಸಿದ್ದು ಕೂಡ ಆಕಸ್ಮಿಕ. ಕಾರ್ ರೇಸರ್ ಆಗಿದ್ದ ಇವರು ಪತ್ರಿಕೋದ್ಯಮದಲ್ಲಿ ಎಂ.ಎ. ಓದುತ್ತಿದ್ದಾಗ ವಾಹಿನಿಯೊಂದು ನಡೆಸಿದ ಫಸ್ಟ್‌ಗೇರ್ ಕಾರ್ಯಕ್ರಮದ ಮೂಲಕ ಕರ್ನಾಟಕದ ಮನೆ, ಮನಸ್ಸನ್ನು ಪ್ರವೇಶಿಸಿದರು.

ನಟನೆಯ ಎಬಿಸಿಡಿ ತಿಳಿಯದ ಇವರು ಮೊದಲ ಬಾರಿಗೆ ಕ್ಯಾಮೆರಾ ಎದುರಿಸಿದ್ದು ‘ಸಿಐಡಿ ಕರ್ನಾಟಕ’ ಧಾರಾವಾಹಿ ಮೂಲಕ. ಅಲ್ಲಿ ಅವರದ್ದು ಸಿಐಡಿ ಆಫೀಸರ್ ಪಾತ್ರ. ಮೊದಲ ಬಾರಿಗೆ ನಟಿಸುವಾಗ ಸೆಟ್‌ನಲ್ಲಿದ್ದ ಜನರ ಮುಖಭಾವ, ವರ್ತನೆ ಎಲ್ಲವನ್ನೂ ನೋಡಿ ಮನಸ್ಸಿಗೆ ಖೇದವಾಗಿ ನಟನೆಯೇ ಬೇಡ ಎಂದುಕೊಂಡವರು ಇಂದು ಆ ಜನರೇ ಮೂಗಿನ ಮೇಲೆ ಬೆರಳಿಟ್ಟುಕೊಂಡು ನೋಡುವಷ್ಟರ ಮಟ್ಟಿಗೆ ನಟನೆಯಲ್ಲಿ ಪ್ರಬುದ್ಧರಾಗಿದ್ದಾರೆ.

‘ನಟನೆ ನನ್ನ ಕನಸಲ್ಲ. ನಟಿಯಾಗಬೇಕು ಎಂದು ನಾನು ಅಂದುಕೊಂಡವಳೇ ಅಲ್ಲ. ಆಕಸ್ಮಿಕವಾಗಿ ಇಲ್ಲಿಗೆ ಬಂದೆ. ಮುಂದೆಯೂ ಇದೇ ನನಗೆ ಜೀವನ ಎಂದು ನಾನು ಹೇಳುವುದಿಲ್ಲ. ಇಲ್ಲಿ ಇದ್ದಷ್ಟು ದಿನ ಸಂಪೂರ್ಣವಾಗಿ ನನ್ನನ್ನು ನಟನೆಯಲ್ಲಿ ತೊಡಗಿಸಿ ಕೊಳ್ಳುತ್ತೇನೆ’ ಎಂದು ನಟನೆ ಬಗ್ಗೆ ಹೇಳುತ್ತಾರೆ.

ಕ್ಲಾಸಿಕಲ್ ಡಾನ್ಸರ್ ಆಗಿರುವ ಅವರು ಬಟ್ಟೆಗಳ ವಿನ್ಯಾಸವನ್ನೂ ಮಾಡುತ್ತಾರೆ. ‘ಪುಟ್ಮಲ್ಲಿ’ ಧಾರಾವಾಹಿಯಲ್ಲಿ ಅವರು ಧರಿಸಿರುವ ಎಲ್ಲಾ ಡ್ರೆಸ್‌ಗಳನ್ನು ಅವರೇ ವಿನ್ಯಾಸ ಮಾಡಿದ್ದಾರೆ. ಆ ಮೂಲಕ ಅವರ ಬಹುಮುಖ ಪ್ರತಿಭೆಯೂ ಅನಾವರಣಗೊಂಡಿದೆ.

ಕಾರುಗಳನ್ನು ಹುಚ್ಚಿಯಂತೆ ಪ್ರೀತಿಸುತ್ತಾರೆ. ‘ಕಾರು ಎಂದರೆ ನನ್ನ ಅಪ್ಪ–ಅಮ್ಮ, ಪ್ರೇಮಿ, ಗಂಡ ಎಲ್ಲವೂ. ನನಗೆ ಏನಾದರೂ ನಾನು ಸಹಿಸಿಕೊಳ್ಳುತ್ತೇನೆ. ಆದರೆ, ನನ್ನ ಕಾರಿಗೆ ಏನಾದರೂ ಆದರೆ ಸಹಿಸುವುದಿಲ್ಲ. ಎಲ್ಲಾದರೂ ಗಲೀಜು ಜಾಗ ಕಾಣಿಸಿದರೆ ನಾನು ಅಲ್ಲಿ ನನ್ನ ಕಾರನ್ನು ಪಾರ್ಕ್ ಮಾಡುವುದಿಲ್ಲ. ಶೂಟಿಂಗ್ ಹೋದಾಗಲೂ ಅಷ್ಟೇ. ಹತ್ತಿರದಲ್ಲಿ ಎಲ್ಲಾದರೂ ಕಾರು ನಿಲ್ಲಿಸಲು ಸರಿಯಾದ ಜಾಗ ಸಿಗದಿದ್ದರೆ ದೂರದಲ್ಲಿ ಕಾರು ನಿಲ್ಲಿಸಿ ಶೂಟಿಂಗ್ ನಡೆಯುವ ಜಾಗಕ್ಕೆ ನಡೆದುಕೊಂಡು ಹೋಗುತ್ತೇನೆ. ನನಗೆ ನನಗಿಂತ ನನ್ನ ಕಾರಿನ ಸುರಕ್ಷತೆಯೇ ಮುಖ್ಯ’ ಎಂದು ಕಾರಿನ ಮೇಲಿನ ಪ್ರೀತಿ ವ್ಯಕ್ತಪಡಿಸುತ್ತಾರೆ.

‘ಸಿಐಡಿ ಕರ್ನಾಟಕ’, ‘ಅಂಬಾರಿ’, ‘ಅಶ್ವಿನಿ ನಕ್ಷತ್ರ’, ‘ಚಂದನದ ಗೊಂಬೆ’, ‘ಪ್ರೀತಿ ಪ್ರೇಮ’, ‘ಕಾದಂಬರಿ ಕಣಜ’, ‘ಗೃಹಲಕ್ಷ್ಮಿ’, ‘ಹರ ಹರ ಮಹಾದೇವ’ ಅವರು ನಟಿಸಿರುವ ಧಾರಾವಾಹಿಗಳು.

ಅವರಿಗೆ ಹೆಸರು ತಂದುಕೊಟ್ಟಿದ್ದು ‘ಕಿನ್ನರಿ’ ಧಾರಾವಾಹಿ. ನೋಡಲು ಸುಂದರವಾಗಿದ್ದರೂ ಖಳನಾಯಕಿ ಪಾತ್ರವೇ ಯಾಕೆ ನಿಮ್ಮನ್ನು ಹುಡುಕಿಕೊಂಡು ಬರುತ್ತಿದೆ ಎಂದು ಕೇಳಿದರೆ, ‘ಬಹುಶಃ ನನ್ನ ಎತ್ತರ ಹಾಗೂ ಮೊದಲ ನೋಟವೇ ಕಾರಣವಿರಬಹುದು. ಮೊದಲ ಬಾರಿಗೆ ನೋಡಿದಾಗ ತುಂಬಾ ರಫ್ ಅಂಡ್ ಟಫ್ ಆಗಿ ಕಾಣುತ್ತೇನೆ. ಆ ಕಾರಣಕ್ಕೆ ನನಗೆ ಖಳನಾಯಕಿ ಪಾತ್ರ ಸರಿ ಹೊಂದುತ್ತದೆ. ಈ ಪಾತ್ರ ಖುಷಿಕೊಟ್ಟಿದೆ’ ಎನ್ನುತ್ತಾರೆ ವೀಣಾ.

‘ಜೀವನದಲ್ಲಿ ಏನನ್ನೂ ನಿರೀಕ್ಷೆ ಮಾಡಿದವಳಲ್ಲ. ಬಂದಿದ್ದೆಲ್ಲವನ್ನೂ ಒಪ್ಪಿಕೊಂಡು ಈ ವೇದಿಕೆಯಲ್ಲಿ ನಿಂತಿದ್ದೇನೆ’ ಎನ್ನುತ್ತಾರೆ ಈ ಕೊಡಗಿನ ಕುವರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT