ಹಾಸನ : ತಾಲ್ಲೂಕಿನ ದುದ್ದ ಹೋಬಳಿಯ ಹಿರೇಕಡಲೂರಿನಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಎ.ಎನ್ .ಪ್ರಕಾಶ್ ಗೌಡ ನೇತೃತ್ವದಲ್ಲಿ ಶಾಂತಿ ಸಭೆ ನಡೆಸಲಾಯಿತು.
ದೇವಾಲಯ ಪ್ರವೇಶ ಸಂಬಂಧ ದಲಿತರು ಹಾಗೂ ಸವರ್ಣೀಯರ ನಡುವೆ ಘರ್ಷಣೆ ನಡೆದು, ಅಶಾಂತಿ ವಾತಾವರಣ ಸೃಷ್ಟಿಯಾಗಿತ್ತು. ಊರಿನಲ್ಲಿ ಸಹಬಾಳ್ವೆ ಮೂಡಿಸಲು ಶಾಂತಿ ಸಭೆ ನಡೆಸಿದರು.
ಅಧಿಕಾರಿಗಳ ಮಾತಿಗೆ ಗೌರವ ನೀಡಿದ ಗ್ರಾಮಸ್ಥರು ಪರಸ್ಪರ ಹೊಂದಾಣಿಕೆಯಿಂದ ಬದುಕುವುದಾಗಿ ಭರವಸೆ ನೀಡಿದರು. ಪೊಲೀಸ್ ವರಿಷ್ಠಾಧಿಕಾರಿ ಎ.ಎನ್ .ಪ್ರಕಾಶ್ ಗೌಡ ಮಾತನಾಡಿ, ‘ಸೃಷ್ಟಿ ಮಾಡುವುದು ಎಲ್ಲಾ ವರ್ಗದ ಜನರ ಜವಾಬ್ದಾರಿಯಾಗಿದೆ. ಜಾತಿ ಮತ ಮೀರಿ ಬದುಕು ಸಾಗಿಸಲು ಗ್ರಾಮಸ್ಥರು ಚಿಂತನೆ ಮಾಡಬೇಕು’ ಎಂದು ಸಲಹೆ ನೀಡಿದರು.
‘ಎಲ್ಲರೂ ಒಂದೇ ಜಾತಿ. ಆದರೆ, ದೇಶದಲ್ಲಿ ಜಾತಿ ವ್ಯವಸ್ಥೆ ಇನ್ನು ಜೀವಂತವಾಗಿರುವುದು ಬೇಸರದ ಸಂಗತಿ. ಬೇರೆಯವರನ್ನು ಅಸಮಾನತೆಯಿಂದ ನೋಡುವ ಮಾನಸಿಕ ಸ್ಥಿತಿಯಿಂದ ಹೊರಗೆ ಬರಬೇಕು’ ಎಂದು ಮನವಿ ಮಾಡಿದರು.
ಉಪವಿಭಾಗಾಧಿಕಾರಿ ಎಚ್.ಎಲ್.ನಾಗರಾಜ್ ಮಾತನಾಡಿ, ‘ಜಾತಿ ಎನ್ನುವುದು ಒಂದು ಅಫೀಮು ಆಗಿದೆ. ಇಂದು ಜಾತಿ, ವರ್ಗ ಸಂಘರ್ಷ ಎರಡೂ ಇದೆ. ಯಾವುದೇ ಕಾರಣಕ್ಕೂ ಜಾತಿಯತೆ ಮಾಡಬಾರದು’ ಎಂದು ಮನವಿ ಮಾಡಿದರು.
ಎರಡು ದಿನಗಳಲ್ಲಿ ದಲಿತರಿಗೂ ದೇವಾಲಯಕ್ಕೆ ಪ್ರವೇಶಕ್ಕೆ ಅವಕಾಶ ಮಾಡಿಕೊಡಲು ತೀರ್ಮಾನಿಸಲಾಯಿತು. ಇದಕ್ಕೆ ಗ್ರಾಮದ ದಲಿತರು ಒಪ್ಪಿಗೆ ಸೂಚಿಸಿದರು.
ತಹಶೀಲ್ದಾರ್ ಶಿವಶಂಕರಪ್ಪ, ಡಿವೈಎಸ್ಪಿ ಪುಟ್ಟಸ್ವಾಮಿಗೌಡ, ಸಮಾಜ ಕಲ್ಯಾಣಾ ಇಲಾಖೆ ಉಪನಿರ್ದೇಶಕ ಶ್ರೀಧರ್, ದುದ್ದ ಪೊಲೀಸ್ ಠಾಣೆ ಸಬ್ ಇನ್ ಸ್ಪೆಕ್ಟರ್ ಹರೀಶ್, ದಲಿತ ಮುಖಂಡರಾದ ಎಚ್.ಕೆ.ಸಂದೇಶ್, ಈರಪ್ಪ, ಆರ್ ಪಿಐ ಸತೀಶ್ ಇದ್ದರು.