ಹಾಸನ : ಸಹಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ರೈತರ ಸಾಲಮನ್ನಾಗೆ ಸಂಬಂಧಿಸಿದಂತೆ ರೈತರ ಸ್ವಯಂ ದಾಖಲೆಗಳ ಸಂಗ್ರಹ ಕಾರ್ಯವನ್ನು ಎರಡು, ಮೂರು ದಿನದೊಳಗೆ ಪೂರ್ಣಗೊಳಿಸಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಎಲ್.ವೈಶಾಲಿ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಬೆಳೆ ಸಾಲಮನ್ನಾ ಕುರಿತು ರೈತರ ದಾಖಲೆ ಸಂಗ್ರಹ ಮತ್ತು ಅಪ್ ಲೋಡ್ ಕಾರ್ಯಗಳ ಪ್ರಗತಿ ಪರಿಶೀಲನಾ ಸಭೆ ಹಾಗೂ ಸಾಲ ಮನ್ನಾ ಪ್ರಕ್ರಿಯೆಗೆ ರೂಪಿಸಲಾಗಿರುವ ತಂತ್ರಾಂಶಗಳ ಬಳಕೆ ಕುರಿತ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಿರಸೃತಗೊಂಡ ಅಥವಾ ಪರಿಶೀಲನೆಗೆ ಶಿಫಾರಸ್ಸುಗೊಳ್ಳುವ ಅರ್ಜಿಗಳ ವಿಲೇವಾರಿಗೆ ತಾಲ್ಲೂಕು ಮಟ್ಟದ ಸಮಿತಿ ರಚನೆ ತಕ್ಷಣವೇ ಕಾರ್ಯಪ್ರವೃತ್ತವಾಗಬೇಕು. ದಾಖಲೆ ಸಂಗ್ರಹ ಕಾರ್ಯ ಎಲ್ಲೆಲ್ಲಿ ಇನ್ನೂ ಪೂರ್ಣಗೊಂಡಿಲ್ಲ, ಅಲ್ಲಿಗೆ ಆಯಾ ಬ್ಯಾಂಕ್ ಗಳ ಇತರ ಶಾಖೆ, ನೆರವು ಒದಗಿಸಬೇಕು ಎಂದು ಹೇಳಿದರು.
ಸಂಗ್ರಹಿತ ದಾಖಲೆಗಳ ಅಪ್ ಲೋಡ್ ಕಾರ್ಯ ಸಮರ್ಪಕವಾಗಿ ಮಾಡಲಾಗಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಬೇಕು. ಹಾಗೆಯೇ ದಾಖಲೆಗಳು ಪುನರ್ ಅವಲೋಕನಕ್ಕೆ ಒಳಪಡಿಸಬೇಕೆ ಎಂಬುದನ್ನು ಆಯಾಯ ಬ್ಯಾಂಕ್ ಗಳ ಎ ಆರ್ ಸಿ ಎಸ್ ಹಾಗೂ ಡಿ ಆರ್ ಸಿ ಎಸ್ಗಳು ಖಾತರಿ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಹಕಾರ ಸಂಘಗಳ ಉಪನಿಬಂಧಕರು, ಲೀಡ್ ಬ್ಯಾಂಕ್ ವ್ಯವಸ್ಥಾಪಕರು, ತಹಶೀಲ್ದಾರರು, ಸಹಾಯಕ ಉಪನಿಬಂಧಕರು ಇದ್ದರು.