ಹಾಸನ : ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿನ ಸಾಲಮನ್ನಾ ಪ್ರಕ್ರಿಯೆ ಡಿ. 13ರಿಂದ ಪ್ರಾರಂಭವಾಗಲಿದ್ದು, ರೈತರಿಂದ ದಾಖಲೆ ಪಡೆಯುವ ಕಾರ್ಯಕ್ಕೆ ಪೂರ್ವ ತಯಾರಿ ಕೈಗೊಳ್ಳುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಎಲ್.ವೈಶಾಲಿ ಅವರು ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ರೈತರ ಸಾಲಮನ್ನಾ ಪ್ರಕ್ರಿಯೆ ಕುರಿತು ನಡೆದ ವಿಡಿಯೊ ಸಂವಾದ ನಂತರ ಲೀಡ್ ಬ್ಯಾಂಕ್ ಹಾಗೂ ರಾಷ್ಟ್ರೀಕೃತ ಬ್ಯಾಂಕ್ ಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಸಾಲ ಪಡೆದಿರುವ ರೈತರು ಆಧಾರ್ ಕಾರ್ಡ್, ಪಡಿತರ ಕಾರ್ಡ್ ಪ್ರತಿಗಳು, ಸರ್ವೆ ನಂಬರ್ ವಿವರ ಸಲ್ಲಿಸಿ ಬ್ಯಾಂಕ್ ಗಳಲ್ಲಿ ನೀಡುವ ಸ್ವಯಂ ಘೊಷಣಾ ಪತ್ರಕ್ಕೆ ಸಹಿ ಮಾಡಬೇಕು. ಇದಕ್ಕಾಗಿ ಎಲ್ಲಾ ಬ್ಯಾಂಕ್ ಶಾಖೆಗಳಲ್ಲಿ ಸೂಕ್ತ ತಯಾರಿ ಮಾಡಿಕೊಳ್ಳುವಂತೆ ನಿರ್ದೇಶನ ನೀಡಿದರು.
ಅನಗತ್ಯ ನೂಕು ನುಗ್ಗಲು-ಒತ್ತಡ ನಿಭಾಯಿಸುವ ಸಲುವಾಗಿ 500ಕ್ಕೂ ಅಧಿಕ ರೈತ ಸಾಲ ಖಾತೆಗಳನ್ನು ಹೊಂದಿರುವ ಬ್ಯಾಂಕ್ ಶಾಖೆಗಳಲ್ಲಿ ಎರಡೆರಡು ಕಂಪ್ಯೂಟರ್ ಗಳನ್ನು ಒಟ್ಟು ರೈತರಿಂದ ಮಾಹಿತಿ ಸಂಗ್ರಹಿಸಬೇಕು. 15 ದಿನಗಳಿಗೆ ಮುಂಚಿತವಾಗಿಯೇ ಟಿಕೆಟ್ಗಳನ್ನು ಮುದ್ರಿಸಿ ಹಂಚಿಕೆ ಮಾಡುವಂತೆ ಹೇಳಿದರು.
ಒಂದು ವೇಳೆ ಪಡಿತರ ಕಾರ್ಡ್ ಇಲ್ಲದಿರುವವರು ವಂಶವೃಕ್ಷ ದಾಖಲೆ ಸಲ್ಲಿಸಬೇಕಾಗುತ್ತದೆ. ಸಿಬ್ಬಂದಿ ಕೊರತೆ ಇರುವ ಕಡೆಗಳಲ್ಲಿ ಬೇರೆ ಶಾಖೆಗಳಿಂದ ನಿಯೋಜನೆ ಮಾಡಿಕೊಂಡು ಮುಂದಿನ 15 ದಿನಗಳ ಒಳಗಾಗಿ ಸಂಪೂರ್ಣ ದಾಖಲೆಯನ್ನು ನಿಗದಿತ
ಆ್ಯಾಪ್ನಲ್ಲಿ ಅಪ್ ಲೋಡ್ ಮಾಡಿ ಎಂದು ತಿಳಿಸಿದರು.
200ಕ್ಕಿಂತ ಕಡಿಮೆ ಖಾತೆಗಳಿರುವ ಬ್ಯಾಂಕ್ ಗಳಲ್ಲಿ ರೈತರಿಗೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿ ಕರೆಸಿಕೊಂಡು ದಾಖಲೆಗಳನ್ನು ಪಡೆಯಬಹುದು. ಆದಷ್ಟು ಬೇಗನೆ ಮತ್ತು ಆದ್ಯತೆ ಮೇರೆಗೆ ಕ್ರಮಕೈಗೊಳ್ಳಬೇಕು ಎಂದರು.
ಬ್ಯಾಂಕ್ಗಳ ನೋಟಿಸ್ ಬೋರ್ಡ್ ಗಳಲ್ಲಿ ರೈತರಿಗೆ ಸಾಲಮನ್ನಾ ಸಲ್ಲಿಸಬೇಕಾದ ದಾಖಲೆಗಳ ಬಗ್ಗೆ ಮಾಹಿತಿ ನೀಡಿ ಕ್ಷೇತ್ರಾಧಿಕಾರಿಗಳನ್ನು ಬಳಸಿ ಅರಿವು ಮೂಡಿಸಬೇಕು ಎಂದು ತಿಳಿಸಿದರು.
ಸಹಕಾರ ಬ್ಯಾಂಕ್ ಗಳಲ್ಲಿನ ಶೇಕಡಾ 90 ರಷ್ಟು ಮಾತ್ರ ವಿವರ ಒದಗಿಸಿದ್ದು, ಡಿ. 13ರ ಒಳಗೆ ಶೇಕಡಾ 100 ರಷ್ಟು ಪೂರ್ಣಗೊಳಿಸಬೇಕು ಎಂದರು.
ಡಿ ಸಿ ಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಮಾತನಾಡಿ, ಈಗಾಗಲೇ ಮಾಹಿತಿ ಅಪ್ ಲೋಡ್ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ನ. 30ರ ವರೆಗಿನ ಸಾಲ ಬಾಕಿ ಜಿಲ್ಲೆಗೆ ₹ 6 ಕೋಟಿ ಸರ್ಕಾರದಿಂದ ಬಿಡುಗಡೆಯಾಗಿದೆ’ ಎಂದು ಮಾಹಿತಿ ನೀಡಿದರು.
ಉಪವಿಭಾಗಾಧಿಕಾರಿ ಎಚ್.ಎಲ್.ನಾಗರಾಜ್, ಸಹಕಾರ ಸಂಘಗಳ ಉಪನಿಬಂಧಕ ನಂಜುಡೇಗೌಡ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಮಂಜುನಾಥ್, ವಿವಿಧ ಬ್ಯಾಂಕ್ ಗಳ ವ್ಯವಸ್ಥಾಪಕರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.