ಹಾಸನ: ಅಶೋಕ್ ಗಸ್ತಿ ಅವರ ನಿಧನದಿಂದಾಗಿ ತೆರವಾದ ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ಅವರ ಪತ್ನಿ ಸುಮಗಸ್ತಿ ಅವರನ್ನು ನೇಮಕ ಮಾಡಬೇಕು ಎಂದು ನಾಮದೇವ ಕುಲವೃತ್ತಿ ಸೇವಾ ಬಳಗದ ಜಿಲ್ಲಾ ಅಧ್ಯಕ್ಷ ನರಸಿಂಹಸ್ವಾಮಿ ಒತ್ತಾಯಿಸಿದರು.
ಅಶೋಕ್ ಗಸ್ತಿ ಅವರನ್ನು ರಾಜ್ಯಸಭಾ ಸದಸ್ಯರಾಗಿ ಆಯ್ಕೆ ಮಾಡಿದಾಗ ಸಮುದಾಯದ ಅಭಿವೃದ್ಧಿಗೆ ಸಹಕರಿಯಾಗಲಿದೆ ಎಂಬ ನಿರೀಕ್ಷೆ ಇತ್ತು. ಆದರೆ, ಗಸ್ತಿ ಅವರು ಒಂದೂವರೆ ತಿಂಗಳಲ್ಲಿ ಅಕಾಲಿಕ ಮರಣಕ್ಕೆ ತುತ್ತಾಗಿರುವುದು ನೋವುಂಟು ಮಾಡಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಶೋಕ್ ಗಸ್ತಿ ಮರಣ ನಂತರ ತೆರವಾಗಿರುವ ಆ ಸ್ಥಾನಕ್ಕೆ ಪತ್ನಿ ಸುಮಾಗಸ್ತಿ ಅವರನ್ನೂ ಅವಿರೋಧವಾಗಿ ಆಯ್ಕೆ ಮಾಡುವ ಮೂಲಕ ಮತ್ತೊಂದು ಬಾರಿ ಅವಕಾಶ ನೀಡಬೇಕು. ಇದರಿಂದ ಸವಿತಾ ಸಮಾಜಕ್ಕೆ ನ್ಯಾಯ ದೊರಕಿಸಿದಂತೆ ಆಗಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸವಿತಾ ಮಹಿಳಾ ಸಂಘದ ಜಿಲ್ಲಾಧ್ಯಕ್ಷೆ ಬಿ.ಎನ್. ಪುಷ್ಪಲತಾ, ಪದಾಧಿಕಾರಿಗಳಾದ ಪದ್ಮಾವತಿ, ಸರಸ್ವತಿ, ನಾಮದೇವ ಕುಲವೃತ್ತಿ ಸೇವಾ ಬಳಗದ ಪಿ.ಎಂ. ಮುರುಗೇಶ್, ರವಿಕುಮಾರ್ ಇದ್ದರು.