ಹಾಸನ: ಜಿಲ್ಲೆಯಲ್ಲಿ ಮಳೆ ಅಬ್ಬರ ಕೊಂಚ ತಗ್ಗಿದ್ದರೂ ಪ್ರವಾಹದ ಭೀತಿ ಮುಂದುವರಿದಿದೆ. ಸಕಲೇಶಪುರ ಪಟ್ಟಣದ ಆಜಾದ್ ರಸ್ತೆ ಸೇರಿದಂತೆ ತಗ್ಗು ಪ್ರದೇಶ ಸಂಪೂರ್ಣ ಜಲಾವೃತವಾಗಿದೆ. ಅಕ್ಷರಶಃ ನದಿಯಂತಾಗಿದೆ. ಆಜಾದ್ ರಸ್ತೆಯ ಎಲ್ಲಾ ನಿವಾಸಿಗಳನ್ನು ಪರಿಹಾರ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ.
ಹೇಮಾವತಿ ಜಲಾಶಯಕ್ಕೆ ದಾಖಲೆ ಪ್ರಮಾಣದ 1 ಲಕ್ಷದ 30 ಸಾವಿರ ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ಅಷ್ಟೇ ಪ್ರಮಾಣದ ನೀರನ್ನು ಹೊರ ಬಿಡಲಾಗುತ್ತಿದೆ.
ಭೂಕುಸಿತ ಉಂಟಾಗಿ ಶಿರಾಡಿ ಘಾಟ್ ಬಂದ್ ಆಗಿದ್ದರೂ, ಹಾಸನ-ಮಂಗಳೂರು ನಡುವಿನ ವಾಹನ ಸವಾರರು ಪ್ರಯಾಣ ಮುಂದುವರಿಸಿದ್ದರಿಂದ ಟ್ರಾಫಿಕ್ ಜಾಂ ಉಂಟಾಗಿದೆ. ಹತ್ತಾರು ಕಿಲೋ ಮೀಟರ್ ವರೆಗೂ ಎಲ್ಲಾ ರೀತಿಯ ವಾಹನಗಳು ಸಾಲುಗಟ್ಟಿವೆ. ಹೊಳೆ ಮಲ್ಲೇಶ್ವರ ದೇವಸ್ಥಾನ ಪೂರ್ಣ ಮುಳುಗಿದೆ.
ರಾಮನಾಥಪುರ, ಹೊಳೆನರಸೀಪುರ-ಚನ್ನರಾಯಪಟ್ಟಣ, ಹೊಳೆನರಸೀಪುರ-ಪಿರಿಯಾಪಟ್ಟಣ ರಸ್ತೆ ಬಂದ್ ಆಗಿದೆ. ಹಾನುಬಾಳು ಸಮೀಪ ಗುಡ್ಡಕುಸಿದು ಸಕಲೇಶಪುರ–ಮೂಡಿಗೆರೆ ರಾಜ್ಯ ಹೆದ್ದಾರಿ ಬಂದ್ ಆಗಿದೆ.