ಹಾಸನ: ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆ ಸಮೀಪದ ವೈದ್ಯ ವಿದ್ಯಾರ್ಥಿಗಳ ವಸತಿ ನಿಲಯದಲ್ಲಿ 150 ಹಾಸಿಗೆಗಳ ಕೋವಿಡ್ ಸ್ಟೆಪ್ಡೌನ್ ಆಸ್ಪತ್ರೆ (ಕೋವಿಡ್ನಿಂದಗುಣಮುಖರಾದವರ ಬಗ್ಗೆ ಮತ್ತಷ್ಟು ದಿನ ನಿಗಾ ವಹಿಸುವ ಕೇಂದ್ರ)ಗೆ ಬುಧವಾರ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಚಾಲನೆ ನೀಡಿದರು.
ಇದೇ ವೇಳೆ ಯುನೈಟೆಡ್ ವೇ ಸಂಸ್ಥೆ ನೀಡಿದ 10 ಲೀಟರ್ ಸಾಮರ್ಥ್ಯದ 30 ಆಮ್ಲಜನಕ ಸಾಂದ್ರಕಗಳನ್ನು ಹಿಮ್ಸ್ ನಿರ್ದೇಶಕ ಡಾ.ಬಿ.ಸಿ.ರವಿಕುಮಾರ್ ಅವರಿಗೆ ಹಸ್ತಾಂತರಿಸಲಾಯಿತು.
ಬಳಿಕ ಮಾತನಾಡಿದ ಸಚಿವ ಕೆ.ಗೋಪಾಲಯ್ಯ, , ₹2.5 ಕೋಟಿ ವೆಚ್ಚದಲ್ಲಿ ಹಿಮ್ಸ್ಕೋವಿಡ್ ಚಿಕಿತ್ಸಾ ವ್ಯವಸ್ಥೆ ಹಾಗೂ ಮಕ್ಕಳ ಚಿಕಿತ್ಸೆಗೆ ಪ್ರತ್ಯೇಕ 30 ವೆಂಟಿಲೇಟರ್ಸೌಲಭ್ಯ ಒದಗಿಸಲು ಯುನೈಟೆಡ್ ವೇ ಸಂಸ್ಥೆ ಮುಂದೆ ಬಂದಿದೆ. ಹಾಲಿ ಹಿಮ್ಸ್ನಲ್ಲಿ 450 ಆಮ್ಲಜನಕ ಯುಕ್ತ ಹಾಸಿಗೆ, 200 ಆಮ್ಲಜನಕ ರಹಿತ ಹಾಸಿಗೆ ಇದೆ. ಹೊಸದಾಗಿ 150 ಬೆಡ್ ಸೇರಿದರೆ 800 ಹಾಸಿಗೆ ಕೋವಿಡ್ ಆಸ್ಪತ್ರೆಯಲ್ಲೇ ದೊರೆಯಲಿವೆ. ಧರ್ಮಸ್ಥಳ ಆಯುರ್ವೇದ ಆಸ್ಪತ್ರೆಯಲ್ಲಿ 200 ಬೆಡ್ಗಳ ಕೋವಿಡ್ ಕೇರ್ ಕೇಂದ್ರ ತೆರೆಯಲಾಗಿದೆ. ಒಂದು ಸಾವಿರ ಮಂದಿಗೆ ಏಕಕಾಲದಲ್ಲಿ ಚಿಕಿತ್ಸೆ ನೀಡಬಹುದಾಗಿದೆ ಎಂದರು.
ಮೂರನೇ ಅಲೆ ತಡೆಗಟ್ಟಲು ಎಲ್ಲಾ ರೀತಿಯ ಸಿದ್ಧತೆ ಈಗಿನಿಂದಲೇ ಮಾಡಿಕೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ ಯಾವುದೇ ಔಷಧಿಯ ಕೊರತೆ ಇಲ್ಲ. ಕೊಣನೂರಿನಲ್ಲಿ ಕೋವಿಡ್ ಆಸ್ಪತ್ರೆ ಪ್ರಾರಂಭಿಸಲಾಗಿದ್ದು. ಡಾಕ್ಟರ್ಸ್ ಫಾರ್ ಯು ಎಂಬ ಸ್ವಯಂ ಸೇವಾ ಸಂಸ್ಥೆ ವ್ಯೆದ್ಯರ ಜವಾಬ್ದಾರಿ ವಹಿಸಿಕೊಂಡಿದೆ ಎಂದರು.
ಜಿಲ್ಲೆಯಲ್ಲಿ ಪಾಸಿಟಿವಿಟಿ ಪ್ರಮಾಣ ದರ ಶೇಕಡಾ 23.21 ರಷ್ಟು ಇದ್ದು, ಇನ್ನೊಂದು ವಾರದಲ್ಲಿ ಶೇಕಡಾ 15 ಕ್ಕಿಂತ ಕಡಿಮೆಯಾಗುವ ನಿರೀಕ್ಷೆ ಇದೆ ಎಂದರು.
ಶಾಸಕರಾದ ಪ್ರೀತಂ ಜೆ ಗೌಡ, ಕೆ. ಎಂ. ಶಿವಲಿಂಗೇಗೌಡ, ವಿಧಾನಪರಿಷತ್ ಸದಸ್ಯ ಎಂ.ಎ ಗೋಪಾಲಸ್ವಾಮಿ, ಜಿಲ್ಲಾಧಿಕಾರಿ ಆರ್. ಗಿರೀಶ್, ಪೊಲೀಸ್ ವರಿಷ್ಠಾಧಿಕಾರಿಆರ್.ಶ್ರೀನಿವಾಸಗೌಡ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎ.ಪರಮೇಶ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಕೃಷ್ಣಮೂರ್ತಿ ಹಾಜರಿದ್ದರು.