ಹಾಸನ: ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಸ್ಥಳೀಯರನ್ನು ವಿಶ್ವಾಸಕ್ಕೆ ತೆಗದುಕೊಳ್ಳದಿರುವುದು ನೋವಾಗಿದೆ ಎಂದು ಬಿಜೆಪಿ ಮುಖಂಡ ಬಿ.ವಿ.ಕರೀಗೌಡ ಅಸಮಾಧಾನ ವ್ಯಕ್ತಪಡಿಸಿದರು.
‘ಲೋಕಸಭಾ ಚುನಾವಣೆಗೆ ಹೊರಗಿನ ಅಭ್ಯರ್ಥಿ ಆಯ್ಕೆ ಮಾಡಿ ಅವರ ಪರ ಪ್ರಚಾರ ಮಾಡುವಂತೆ ಸೂಚಿಸಿದ್ದಾರೆ. ಈ ಬೆಳವಣಿಗೆಯಿಂದ ಮನನೊಂದು ನಾವು ಮತ್ತು ಬೆಂಬಲಿಗರು ಜೆಡಿಎಸ್ ಸೇರುತ್ತಿದ್ದೇವೆ’ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯ ಬಿಜೆಪಿ ನಾಯಕರು ಸ್ಥಳೀಯ ನಾಯಕರನ್ನು ವಿಶ್ವಾಸಕ್ಕೆ ತೆಗದುಕೊಂಡಿಲ್ಲ. ರಾಷ್ಟ್ರ ಮಟ್ಟದ ಮಂಡಳಿಗಳಿಗೂ ನೇಮಿಸಿಲ್ಲ. ಪಕ್ಷದ ಏಳಿಗೆಗೆ ದುಡಿದವರನ್ನು ನಿರ್ಲಕ್ಷಿಸಲಾಗಿದೆ. ಜಿಲ್ಲೆಯಲ್ಲಿ ಪಕ್ಷ ಸದೃಢಗೊಳಿಸಲು ಸ್ಥಳೀಯ ನಾಯಕರಿಗೆ ಹಲವು ಬಾರಿ ಮನವಿ ಮಾಡಿದ್ದರೂ ಕಡೆಗಣಿಸಿರುವುದರಿಂದ ಬೇಸರಗೊಂಡು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಲಾಗಿದೆ ಎಂದು ನುಡಿದರು.
ಪಕ್ಷದವರಿಗೆ ಟಿಕೆಟ್ ಕೊಡುವ ಬದಲು ಹೊರಗಿನಿಂದ ಬಂದವರಿಗೆ ಟಿಕೇಟ್ ನೀಡಿ ಅವಮಾನಿಸಲಾಗಿದೆ, ಟಿಕೆಟ್ ಕೊಡುವ ಮೊದಲು ಸ್ಥಳೀಯ ಮುಖಂಡರನ್ನು ಒಂದು ಮಾತು ಕೇಳದೆ ರಾಜ್ಯಧ್ಯಕ್ಷರೇ ತೀರ್ಮಾನ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ನರೇಂದ್ರ ಮೋದಿ ಅವರನ್ನು ನೋಡಿ ನಾನು ಬಿಜೆಪಿ ಸೇರಿದೆ. ಆದರೆ, ರಾಜ್ಯ ಅಥವಾ ಜಿಲ್ಲೆಯಲ್ಲಿ ಮೋದಿಯವರನ್ನು ಹಿಂಬಾಲಿಸುತ್ತಿಲ್ಲ ಎಂದರು.
ಜೆಡಿಎಸ್ ಅಭ್ಯರ್ಥಿ ಆರ್. ಪ್ರಜ್ವಲ್ ಅವರನ್ನು 3 ಲಕ್ಷ ಮತಗಳ ಅಂತರದಲ್ಲಿ ಗೆಲ್ಲಿಸುತ್ತೇವೆ, ಜೆಡಿಎಸ್ ಕುಟುಂಬ ರಾಜಕಾರಣ ಮಾಡುತ್ತಿದೆ ಎಂದು ಹೇಳುತ್ತಾರೆ. ಆದರೆ, ಬಿಜೆಪಿಯಲ್ಲಿ 42 ಕುಟುಂಬಗಳು ಕುಟುಂಬ ರಾಜಕಾರಣ ನಡೆಸುತ್ತಿವೆ ಎಂದು ದೂರಿದರು.
ಕಟ್ಟಾಯ ಗ್ರಾಮ ಪಂಚಾಯಿತಿ ಅಧ್ಯಕ್ಷ ಪುಟ್ಟೇಗೌಡ ಮಾತನಾಡಿ, 11 ಸದಸ್ಯರು ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಗಳುತ್ತಿದ್ದೇವೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಕಟ್ಟಾಯ ಆಶೋಕ್, ಮಂಜುನಾಥ್ ಶರ್ಮ, ಚಂದ್ರು, ಸಲ್ಮಾನ್ಪಾಷ ಇದ್ದರು.