ಆಲೂರು: ತಾಲ್ಲೂಕಿನ ಕೆಂಚಮ್ಮನ ಹೊಸಕೋಟೆ ಹೋಬಳಿಯ ಹರಿಹಳ್ಳಿ ಕೆಂಚಾಂಬಿಕೆ ದೇವಾಲಯದ ಹಿಂಭಾಗ ದಲ್ಲಿ ಶನಿವಾರ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಕಾಡಾನೆ ಘೀಳಿಟ್ಟಿದ್ದು, ಇದರಿಂದ ಹೆದರಿದ ತಹಶೀಲ್ದಾರ್ ಶಿರೀನ್ ತಾಜ್, ಭೂಮಾಪಕ ಅಧಿಕಾರಿ ಕುಮಾರ್ ಓಡುವ ವೇಳೆ ಬಿದ್ದು ಗಾಯಗೊಂಡಿದ್ದಾರೆ.
ದೇವಾಲಯದ ಆವರಣದಲ್ಲಿ ತಾಲ್ಲೂಕು ಆಡಳಿತದಿಂದ ಏರ್ಪಡಿಸಿದ್ದ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಇವರು, ಬಳಿಕ ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದರು. ಸರ್ವೆ ಮಾಡುತ್ತಿದ್ದರು.
ಕಲ್ಯಾಣಿ ಸಮೀಪ ಒತ್ತುವರಿಯಾಗಿದ್ದ ಜಾಗವನ್ನು ಅಳತೆ ಮಾಡುತ್ತಿದ್ದ ವೇಳೆ 40 ಅಡಿ ದೂರದಲ್ಲಿರುವ ಕಾಫಿ ತೋಟದಲ್ಲಿ ಕಾಡಾನೆ ಘೀಳಿಟ್ಟಿತು. ಆತಂಕಗೊಂಡ ಶಿರೀನ್ತಾಜ್ ಓಡುವ ವೇಳೆ ಚಪ್ಪಲಿ ತೊಡಕಿ ಬಿದ್ದರು. ಅವರನ್ನು ದೇವಾಲಯದ ಅರ್ಚಕರು ಮೇಲೆತ್ತಿದರು. ಇದೇ ವೇಳೆ ಕುಮಾರ್ ಸಹ ಬಿದ್ದು ಎದೆಗೆ ಪೆಟ್ಟಾಯಿತು.
ಆಸ್ಪತ್ರೆಯಲ್ಲಿ ಶಿರೀನ್ ತಾಜ್ ಮತ್ತು ಕುಮಾರ್ ಅವರಿಗೆ ಇಸಿಜಿ, ರಕ್ತದೊತ್ತಡ ಪರೀಕ್ಷೆ ಮಾಡಲಾಯಿತು.