ಸಕಲೇಶಪುರ: ರಸ್ತೆ ಬದಿಯ ಹೋಟೆಲ್ನಲ್ಲಿ ದನದ ಮಾಂಸದ ಅಡುಗೆ ತಯಾರಿಸಿ ವ್ಯವಹಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಭಜರಂಗದಳದ ಕಾರ್ಯಕರ್ತರು, ಇಡೀ ಟೆಂಟ್ ಗೆ ಬೆಂಕಿ ಹಚ್ಚಿರುವ ಘಟನೆ ಗುರುವಾರ ನಡೆದಿದ್ದು, ಪ್ರಕರಣ ಈಗ ಬೆಳಕಿಗೆ ಬಂದಿದೆ.
ಘಟನೆಯಲ್ಲಿ ತಾಲ್ಲೂಕಿನ ಬಾಳೆಗದ್ದೆ ನಿವಾಸಿಗಳಾದ ಖಮರುನ್ನೀಸಾ, ಶಂಷಾದ್ ಎಂಬುವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸಕಲೇಶಪುರ ನಗರ ಠಾಣೆಯಲ್ಲಿ ಆರು ಮಂದಿಯ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಖಮರುನ್ನೀಸಾ ಅವರು ನಾಲ್ಕು ದಶಕಗಳಿಂದ ಸಂತೆ ಮೈದಾನದ ಪಕ್ಕ ಟೆಂಟ್ ಹಾಕಿಕೊಂಡು ನಾನ್ ವೆಜ್ ಹೋಟೆಲ್ ನಡೆಸುತ್ತಿದ್ದರು. ದನದ ಮಾಂಸದ ಅಡುಗೆ ನೀಡುತ್ತಿದ್ದಾರೆ ಎಂದು ಭಜರಂಗದಳದ ಕಾರ್ಯಕರ್ತರು ಏಕಾಏಕಿ ದಾಳಿ ಮಾಡಿ, ಇಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ.
‘ದನದ ಮಾಂಸದೂಟ ಮಾಡುತ್ತಿರಲಿಲ್ಲ. ಚಿಕನ್ ಊಟ ಮಾಡುತ್ತಿದ್ದೆವು. ಆದರೆ ಅವರು ತಪ್ಪಾಗಿ ಗ್ರಹಿಸಿ ನಮ್ಮ ಮೇಲೆ ದಾಳಿ ಮಾಡಿ, ಎಲ್ಲಾ ವಸ್ತುಗಳಿಗೆ ಬೆಂಕಿ ಹಚ್ಚಿದರು. ಮತ್ತೆ ಹೋಟೆಲ್ ವ್ಯಾಪಾರ ಮಾಡಿದರೆ ಸುಟ್ಟು ಹಾಕುತ್ತೇವೆ ಅಂತ ಬೆದರಿಕೆ ಹಾಕಿದ್ದಾರೆ’ ಎಂದು ಹಲ್ಲೆಗೊಳಗಾದ ಖಮರುನ್ನೀಸಾ ಅಳಲು ತೋಡಿಕೊಂಡರು.
‘ನೈತಿಕ ಪೊಲೀಸ್ ಗಿರಿ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಪೊಲೀಸರು ನಿರ್ಲಕ್ಷ್ಯ ತಾಳಿದ್ದಾರೆ. ಅಮಾನವೀಯ ಕೃತ್ಯ ಎಸಗಿರುವವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ದಲಿತ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.