ಅರಸೀಕೆರೆ : ‘ಎಲ್ಲಾಧರ್ಮ ಮತ್ತುಸಮುದಾಯವನ್ನುಸಮಾನ ದೃಷ್ಟಿಯಿಂದ ಕಂಡಿದ್ದೇನೆ. ಹಿಂದೂ ಧರ್ಮಕ್ಕೆ ವಿರುದ್ಧವಾಗಿ ನಡೆದುಕೊಂಡಿರುವುದನ್ನು ಬಹಿರಂಗ ಪಡಿಸಲಿ’ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘13 ವರ್ಷಗಳ ರಾಜಕೀಯ ಇತಿಹಾಸದಲ್ಲಿ ತಾಲ್ಲೂಕಿನ ಪ್ರತಿ ಗ್ರಾಮಗಳಿಗೂ ದೇವಾಲಯಗಳ ನಿರ್ಮಾಣ ಹಾಗೂ ಜೀರ್ಣೋದ್ಧಾರಕ್ಕೆ ಶ್ರಮಿಸಿದ್ದೇನೆ. ನಾನು ಹಿಂದೂ ಧರ್ಮಕ್ಕೆ ವಿರುದ್ಧವಾಗಿ ನಡೆದುಕೊಂಡಿಲ್ಲ. ಕೆಲ ಬಿಜೆಪಿ ಮುಖಂಡರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಅವರ ಪಕ್ಷದ ಕಾರ್ಯಕರ್ತರನ್ನು ದಾರಿ ತಪ್ಪಿಸುವ ಕೆಲಸ ಮಾಡುವ ಮೂಲಕ ನನ್ನ ವಿರುದ್ಧ ಧಿಕ್ಕಾರ ಕೂಗಿಸಿದ್ದಾರೆ’ ಎಂದರು.
‘ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳದವರ ಆರೋಪ ಸತ್ಯಕ್ಕೆ ದೂರ.ಈದ್ಮಿಲಾದ್ ಹಬ್ಬದ ದಿನ ನಡೆದ ಮೆರವಣಿಗೆಗೂ ನನಗೂ ಸಂಬಂಧವಿಲ್ಲ. ಉದ್ದೇಶಪೂರ್ವಕವಾಗಿ ಕೆಲವು ಬಿಜೆಪಿ ಮುಖಂಡರು ನನ್ನ ವಿರುದ್ಧ ಧಿಕ್ಕಾರ ಕೂಗಿಸಿದ್ದಾರೆ.ಕುತಂತ್ರ ರಾಜಕಾರಣ ಮಾಡುತ್ತಿರುವವರು ಯಾರು ಎಂಬುದು ಗೊತ್ತಿದೆ.ಇದಕ್ಕೆಲ್ಲಾ ಕ್ಷೇತ್ರದ ಜನರೇ ಕಾಲ ಬಂದಾಗ ಉತ್ತರ ನೀಡುತ್ತಾರೆ’ ಎಂದರು.
ತಾಲ್ಲೂಕಿನಲ್ಲಿ ರಾಜಕಾರಣ ಮಾಡಲು ಹೊರಗಿನಿಂದ ಬಂದಿರುವ ಕೆಲವರು ಹತಾಶರಾಗಿದ್ದಾರೆ. ಸರ್ವ ಜನಾಂಗದ ಮಹನೀಯರ ಜಯಂತಿ ಆಚರಿಸುತ್ತಿದ್ದೇವೆ. ಯಾವುದೇ ಜಾತಿ ಮತ್ತು ಧರ್ಮ ಎಂಬ ಭೇದವಿಲ್ಲ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹುಚ್ಚೇಗೌಡ, ನಗರಸಭೆ ಉಪಾಧ್ಯಕ್ಷ ಕಾಂತೇಶ್, ಎಪಿಎಂಸಿ ಅಧ್ಯಕ್ಷ ನಾಗರಾಜ ನಾಯ್ಕ್, ಜೆಡಿಎಸ್ ಮುಖಂಡರಾದ ಧರ್ಮಶೇಖರ್ ಗೀಜಿಹಳ್ಳಿ ಇದ್ದರು.