ಸಕಲೇಶಪುರ: ಮಾಂಗಲ್ಯ ಸರ ಕಿತ್ತು ಪರಾರಿ ಆಗಿದ್ದ ಮೂವರು ಆರೋಪಿಗಳನ್ನು, ಕಳವು ಮಾಡಿದ್ದ ಆಭರಣ ಹಾಗೂ ಪರಾರಿಯಾಗಲು ಬಳಿಸಿದ್ದ ಬೈಕ್ ಅನ್ನು ಇಲ್ಲಿನ ಪೊಲೀಸರು ಪತ್ತೆ ಹಚ್ಚಿದ್ದಾರೆ.
2019ರ ಅಕ್ಟೋಬರ್ 22ರಂದು ಪಟ್ಟಣದ ಲಕ್ಷ್ಮಿಪುರ ಬಡಾವಣೆಯ ನಿವಾಸಿ ಯಶೋದಾ ಅವರು ಚಿಲ್ಲರೆ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದಾಗ ಗ್ರಾಹಕರಂತೆ ಬಂದ ಚಿಕ್ಕಮಗಳೂರು ಟೌನ್ ಗೌರಿಕಾಲುವೆ ವಾಟರ್ ಟ್ಯಾಂಕ್ ಸಮೀಪದ ನಿವಾಸಿ ಅರಾಫರ್ ಬಿನ್ ಪ್ಯಾರು, ಹಾಲೇನಹಳ್ಳಿ ದುರ್ಗಾ ದೇವಸ್ಥಾನ ಸಮೀಪದ ನಿವಾಸಿ, ಆಟೊ ಚಾಲಕ ಜಹೀರ್ ಬಿನ್ ಬಷೀರ್ ಅಹಮ್ಮದ್, ಮತ್ತೊಬ್ಬ ಯಶೋದಾ ಮಾಂಗಲ್ಯ ಸರ ಕಿತ್ತು ಬೈಕ್ನಲ್ಲಿ ಪರಾರಿಯಾಗಿದ್ದರು. ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸಗೌಡ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಂದಿನಿ ಅವರ ಉಸ್ತುವಾರಿಯಲ್ಲಿ ಡಿವೈಎಸ್ಪಿ ಬಿ.ಆರ್.ಗೋಪಿ, ಇನ್ಸ್ಪೆಕ್ಟರ್ ಬಿ.ಗಿರೀಶ್, ಪಿಎಸ್ಐ ರಾಘವೇಂದ್ರ, ಚಂದ್ರಶೇಖರ್ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿತ್ತು.
ಆರೋಪಿಗಳು ಹಾಸನದ ಆಜಾದ್ ರಸ್ತೆಯ ಬಳಿಯ ಅಂಗಡಿಯೊಂದರ ಸಮೀಪ ಮಂಗಳವಾರ ಅವರು ಇರುವ ಖಚಿತ ಮಾಹಿತಿ ಮೇರೆಗೆ ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು ₹ 1.75 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ದ್ವಿ ಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಚಿಕ್ಕಮಗಳೂರು ಟೌನ್ನಲ್ಲಿಯೂ ಸರ ಕಳವು ಪ್ರಕರಣದ ಆರೋಪಿಗಳಾಗಿದ್ದಾರೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಧಿಕಾರಿಗಳ ತಂಡದಲ್ಲಿ ಸತೀಶ್, ನಾಗರಾಜು, ಸುನಿಲ್, ಲೋಕೇಶ್, ಪೃಥ್ವಿ, ಅಶೋಕ್, ಹರೀಶ್, ಶ್ರೀಧರ್ ಜಿಲ್ಲಾ ಪೊಲೀಸ್ ಕಚೇರಿಯ ಫೀರ್ಖಾನ್, ಚಾಲಕರಾದ ಅಶೋಕ್, ಬಿ.ಆರ್.ಮಧು ಮತ್ತು ಶಬ್ದುಲ್ ರೆಹಮಾನ್ ಇದ್ದರು.