ಬೇಲೂರು: ಈ ಬಾರಿ ಪ್ರಾದೇಶಿಕ ಪಕ್ಷ ಉದಯವಾಗುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿದರು.
ಚಿಕ್ಕಮಗಳೂರಿಗೆ ತೆರಳುವ ಮಾರ್ಗ ಮಧ್ಯೆ ಇಲ್ಲಿನ ನೆಹರುನಗರದಲ್ಲಿ ಕಾರ್ಯಕರ್ತರನ್ನು ಭೇಟಿ ಮಾಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡೂ ರಾಷ್ಟ್ರೀಯ ಪಕ್ಷಗಳು ಪರಸ್ಪರ ಕಿತ್ತಾಟದಲ್ಲಿ ತೊಡಗಿದ್ದು, ಜನರ ಬಗ್ಗೆ ಕಾಳಜಿ ವಹಿಸುವಲ್ಲಿ ವಿಫಲವಾಗಿವೆ ಎಂದರು.
ಜೆಡಿಎಸ್ 93 ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಿಸಿದೆ. ಬೇರೆ ಪಕ್ಷದವರು ಇನ್ನು ಅಭ್ಯರ್ಥಿಗಳ ಪಟ್ಟಿ ಘೋಷಣೆ ಮಾಡಿಲ್ಲ. ಕಾಂಗ್ರೆಸ್ ಪಕ್ಷದ ಮನೆಗೆ ಬಾಗಿಲೇ ಇಲ್ಲ. ನಾವು ರೈತರ ಮಕ್ಕಳು. ಅದಕ್ಕಾಗಿ ನಮ್ಮ ಎಚ್.ಡಿ. ಕುಮಾರಸ್ವಾಮಿ ಮುಂದಿನ ಮುಖ್ಯಮಂತ್ರಿ ಎಂದು ಹೇಳಿದ್ದೇವೆ.ನಾಳೆ ನಡೆಯುವ ಸಭೆಯಲಿ ಮುಖ್ಯ ಮಂತ್ರಿ ಯಾರು ಎಂದು ಘೋಷಣೆ ಮಾಡಲಿ ಎಂದರು.
ಯಾರದ್ದೋ ಹೆಸರು ಹೇಳಿಕೊಂಡು ಉಧೋ ಎನ್ನುವುದಲ್ಲ. ಒಬ್ಬರು ಸೋನಿಯಮ್ಮನ ಉಧೋ ಎನ್ನುವ ಬದಲು ಕನ್ನಡಮ್ಮನ ಪರವಾಗಿ ಕೈಎತ್ತಿ ಎಂದ ಅವರು, ಎರಡೂ ರಾಷ್ಟ್ರೀಯ ಪಕ್ಷಗಳಿಂದ ರೈತರ ಹಾಗೂ ಜನಸಾಮಾನ್ಯರ ಮೇಲೆ ಆಗುತ್ತಿರುವ ದೌರ್ಜನ್ಯ ತೊಳೆಯಲು ಎಚ್.ಡಿ. ದೇವೇಗೌಡ, ನಿಜಲಿಂಗಪ್ಪ ಹಾಗೂ ವೀರೇಂದ್ರ ಪಾಟೀಲರು ಕಟ್ಟಿದ ಜೆಡಿಎಸ್ ಪಕ್ಷ ಈ ಬಾರಿ ಅಧಿಕಾರಕ್ಕೆ ಹಿಡಿಯುವುದಕ್ಕೆ ಪ್ರತೀ ತಾಲ್ಲೂಕಿನಲ್ಲಿ ನಡೆಯುತ್ತಿರುವ ಪಂಚರತ್ನ ರಥಯಾತ್ರೆಯೇ ಸಾಕ್ಷಿ ಎಂದು ಹೇಳಿದರು.
ಅತಿ ಶೀಘ್ರದಲ್ಲೇ ಬೇಲೂರಿಗೂ ಪಂಚರತ್ನ ರಥಯಾತ್ರೆ ಬರಲಿದ್ದು, ನಮ್ಮ ಶಕ್ತಿ ಏನು ಎಂಬುದನ್ನು ಮತ್ತೊಮ್ಮೆ ಪ್ರದರ್ಶನ ಮಾಡುತ್ತೇವೆ. ಚನ್ನಕೇಶವನ ಆರ್ಶಿರ್ವಾದದಿಂದ ಲಿಂಗೇಶ್ ಗೆದ್ದು ಬರುತ್ತಾರೆ. ನಾವೇ ಅಧಿಕಾರ ಹಿಡಿಯುವುದು ಶತಸಿದ್ಧ ಎಂದರು.