ಹಾಸನ: ಕಂದಾಯ ಇಲಾಖೆ ಹಾಗೂ ನಗರಸಭೆ ಅಧಿಕಾರಿಗಳು ಭಾನುವಾರ ನಗರದ ಕಲ್ಯಾಣ ಮಂಟಪಗಳಿಗೆ ಭೇಟಿ ನೀಡಿ, ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆತಿಳುವಳಿಕೆ ನೀಡಿದರು.
ಗುಂಪು ಗುಂಪಾಗಿ ಕುಳಿತಿದ್ದ ಜನರಿಗೆ ಅಂತರ ಕಾಯ್ದುಕೊಳ್ಳುವಂತೆ ಅರಿವು ಮೂಡಿಸಿ, ಮಾಸ್ಕ್, ಸ್ಯಾನಿಟೈಸರ್ ಬಳಸುವಂತೆ ಸೂಚಿಸಿದರು.
ಕೊರೊನಾ ಸೋಂಕು ಹೆಚ್ಚುತ್ತಿರುವುದರಿಂದ ಉಪವಿಭಾಗಾಧಿಕಾರಿ ಎ.ಸಿ.ಜಗದೀಶ್ , ತಹಶೀಲ್ದಾರ್ ಶಿವಶಂಕರಪ್ಪ, ಮುನ್ಸಿಪಲ್ ತಹಶೀಲ್ದಾರ್ ರಮೇಶ್ ನೇತೃತ್ವದ ತಂಡಗಳನ್ನು ರಚಿಸಿದ್ದು, ಮೂರು ತಂಡಗಳು ನಗರದ ಕಲ್ಯಾಣ ಮಂಟಪಗಳ ಭೇಟಿ ನೀಡಿ, ಹೆಚ್ಚು ಜನ ಸೇರದಂತೆ ಜಾಗೃತಿ ಮೂಡಿಸಿದವು.
ನಗರಸಭೆ ಪೌರಾಯುಕ್ತ ಕೃಷ್ಣಮೂರ್ತಿ, ತಹಶೀಲ್ದಾರ್ ರಮೇಶ್ ಅವರ ತಂಡ ಮಾಸ್ಕ ಧರಿಸದವರಿಗೆ ಸ್ಥಳದಲ್ಲೇ ದಂಡ ವಿಧಿಸಿತು.ಊಟದ ಹಾಲ್ ನಲ್ಲಿ ಒಂದು ಟೇಬಲ್ ಗೆ ಎರಡು ಕುರ್ಚಿಗಳನ್ನು ಹಾಕಿಸಿ, ಅಂತರ ಪಾಲನೆ ಮಾಡುವಂತೆ ಸೂಚಿಸಲಾಯಿತು.
ಕೊರೊನಾ ಸೋಂಕು ವ್ಯಾಪಿಸದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿರುವ ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಪೊಲೀಸ್, ನಗರಸಭೆ ಅಧಿಕಾರಿಗಳು ನಿರಂತರ ಸಭೆಗಳನ್ನು ನಡೆಸಿ, ನಿಯಂತ್ರಣಕ್ಕೆಪೂರಕ ಚರ್ಚೆ ನಡೆಸುತ್ತಿದ್ದಾರೆ.
ಪೊಲೀಸರು, ನಗರಸಭೆ ತಂಡ ಬೀದಿಗಿಳಿದು ಮಾಸ್ಕ್ ಧರಿಸದವರಿಗೆ ದಂಡದ ಅಸ್ತ್ರ ಪ್ರಯೋಗಿಸುತ್ತಿದೆ. ಪೊಲೀಸ್ ಇಲಾಖೆ ಆರು ತಿಂಗಳಲ್ಲಿ ನಾಲ್ಕು ಸಾವಿರ ಜನಕ್ಕೆ ದಂಡ ವಿಧಿಸಿ ₹ 4 ಲಕ್ಷ ವಸೂಲಿ ಮಾಡಿದೆ. ನಗರಸಭೆ ಅಧಿಕಾರಿಗಳು ಒಂದು ಲಕ್ಷ ರೂಪಾಯಿ ವಸೂಲು ಮಾಡಿದ್ದಾರೆ. ಅಲ್ಲದೇ ನಿತ್ಯ 50ಕ್ಕೂ ಹೆಚ್ಚು ಮಂದಿಗೆ ದಂಡ ವಿಧಿಸುತ್ತಿದ್ದಾರೆ.
ಸರ್ಕಾರದ ಆದೇಶದಂತೆ ನಿಯಮ ಪಾಲಿಸದವರಿಗೆ ದಂಡ ವಿಧಿಸಲಾಗುತ್ತಿದೆ. ಅಧಿಕಾರಿಗಳು ಮಾರುಕಟ್ಟೆ, ಜನದಟ್ಟಣೆ ಪ್ರದೇಶದಲ್ಲಿ ಮಾಸ್ಕ್ ಧರಿಸದವರಿಂದ ಒಂದು ಲಕ್ಷ ರೂಪಾಯಿ ದಂಡ ವಸೂಲಿ ಮಾಡಿದ್ದಾರೆ’ ಎಂದು ನಗರಸಭೆ ಆಯುಕ್ತ ಕೃಷ್ಣಮೂರ್ತಿ ತಿಳಿಸಿದರು.