ಹಾಸನ: ಸಕಲೇಶಪುರ ತಾಲ್ಲೂಕಿನ ಹಲಸುಲಿಗೆ ಬಳಿ 25ಕ್ಕೂ ಹೆಚ್ಚು ಕಾಡಾನೆಗಳು ಗುರುವಾರ ರಾತ್ರಿ 9 ಗಂಟೆಗೆ ರಸ್ತೆ ದಾಟಿದ್ದು, ಈ ರಸ್ತೆಯಲ್ಲಿ ಸಾಗುತ್ತಿದ್ದ ವಾಹನಗಳ ನಿಂತಲ್ಲಿಯೇ ನಿಲ್ಲಬೇಕಾಯಿತು.
ಮರಿಯಾನೆಗಳೂ ಸೇರಿದಂತೆ 25ಕ್ಕೂ ಹೆಚ್ಚು ಕಾಡಾನೆಗಳು ಒಂದರ ಹಿಂದೆ ಒಂದರಂತೆ ರಸ್ತೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ಹಾದು ಹೋಗಿವೆ. ರಾತ್ರಿಯಾಗಿದ್ದರಿಂದ ವಾಹನ ಸವಾರರು ಲೈಟ್ ಹಾಕಿಕೊಂಡಿದ್ದು, ಈ ಲೈಟ್ನ ಬೆಳಕಿನಲ್ಲಿ ಆನೆಗಳ ಹಿಂಡು ರಸ್ತೆ ದಾಟುತ್ತಿರುವುದು ಸ್ಪಷ್ಟವಾಗಿ ಗೋಚರಿಸಿದೆ.
ಮಲೆನಾಡು ಭಾಗದಲ್ಲಿ ಆನೆಗಳು ನಿತ್ಯ ಕಾಣಿಸಿಕೊಳ್ಳುತ್ತಿವೆ. ಬೈಕೆರೆ, ನಾಗರ, ಮಾಗಡಿ, ಹಲಸುಲಿಗೆ ಭಾಗದಲ್ಲಿ ಒಂದು ವಾರದಿಂದ ಕಾಡಾನೆಗಳು ಹಿಂಡು ಹಿಂಡಾಗಿ ಸಂಚರಿಸುತ್ತಿದ್ದು, ಸ್ಥಳೀಯರ ಮೊಬೈಲ್ಗಳಲ್ಲಿ ಬರಿ ಕಾಡಾನೆಗಳ ವಿಡಿಯೊ ಹರಿದಾಡುತ್ತಿವೆ.
ಗುಂಪು ಗುಂಪಾಗಿ ಕಾಡಾನೆಗಳು ಭತ್ತದ ಗದ್ದೆ, ಕಾಫಿ ತೋಟಗಳ ಓಡಾಡುವುದರಿಂದ ಬೆಳೆ ನಾಶವಾಗುತ್ತಿವೆ. ಅಕಾಲಿಕ ಮಳೆಯಿಂದ ಸಂಕಷ್ಟಕ್ಕೆ ಒಳಗಾಗಿರುವ ರೈತರು, ಕಾಡಾನೆಗಳ ಹಾವಳಿಯಿಂದ ಕಂಗಾಲಾಗಿದ್ದಾರೆ.