ಹಾಸನ: ಬಿ.ಎಸ್.ಯಡಿಯೂರಪ್ಪ ಅವರನ್ನೇ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಸಬೇಕು ಎಂದು ಆಗ್ರಹಿಸಿ ವೀರಶೈವ ಲಿಂಗಾಯತ ಯುವ ಸೇವೆ ವತಿಯಿಂದ ಗುರುವಾರ ಪ್ರತಿಭಟನೆನಡೆಸಲಾಯಿತು.
ಯುವ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಅವಿನಾಶ್ ನೇತೃತ್ವದಲ್ಲಿ ನೂರಾರು ಮಂದಿ ನಗರದ ಹೇಮಾವತಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿ, ‘ಯಡಿಯೂರಪ್ಪ ಅವರನ್ನು ಉಳಿಸಿ’ ಎಂಬ ಘೋಷಣೆ ಮೊಳಗಿಸಿದರು.
ರೈತ ನಾಯಕ ಹಾಗೂ ರಾಜ್ಯದಲ್ಲಿ ಬೇರು ಮಟ್ಟದಿಂದ ಬಿಜೆಪಿ ಕಟ್ಟಿ ಬೆಳಸಿ, ಅಧಿಕಾರಕ್ಕೆ ತಂದಂತಹ ನಾಯಕನನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ನಡೆಸುತ್ತಿರುವಷಡ್ಯಂತ್ರವನ್ನು ನಿಲ್ಲಿಸಿ, ಅವಧಿ ಪೂರ್ಣಗೊಳಿಸಲು ಅವಕಾಶ ಮಾಡಿಕೊಡಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.
ಇಳಿ ವಯಸ್ಸಿನಲ್ಲಿಯೂ 18 ಗಂಟೆ ತಾಸು ಕರ್ತವ್ಯ ನಿರ್ವಹಿಸುತ್ತಿದ್ದು, ಕೋವಿಡ್ ನಿರ್ವಹಣೆಯನ್ನುಅತ್ಯುತ್ತಮವಾಗಿ ನಿರ್ವಹಿಸಿದ್ದಾರೆ. 2023ರ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ತರಬೇಕಾದರೆ ಇವರ ಅವಶ್ಯಕತೆ ಇದೆ. ರಾಷ್ಟ್ರೀಯ ನಾಯಕರು ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಯಡಿಯೂರಪ್ಪ ಅವರನ್ನು ಸಿ.ಎಂ ಸ್ಥಾನದಿಂದ ಇಳಿಸಿದರೆ ತೀವ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಯುವ ಸೇನೆ ಉಪಾಧ್ಯಕ್ಷರಾದಕೆ.ಬಿ.ನಾಗೇಶ್,ಎಚ್.ಕೆ.ಪ್ರದೀಪ್, ಸದಸ್ಯರಾದ ಜಿ.ಅವಿನಾಶ್ ಮತ್ತು ಎಸ್.ಮೋಹನ್ ಕುಮಾರ್, ವೀರೇಶ್, ರಾಜು, ದಿಲೀಪ್, ದರ್ಶನ್ ಮುಖಂಡರಾದ ಬಿ.ಆರ್.ವಸಂತ್ ಕುಮಾರ್, ಹೇಮೇಶ್, ಆಲೂರು ಹೇಮಂತ್, ಮೋಹನ್ಇದ್ದರು.