ಹಾಸನ: ನಗರದ ಕೆ.ಆರ್. ಪುರಂ 3ನೇ ಅಡ್ಡ ರಸ್ತೆಯಲ್ಲಿ ಮಂಗಳವಾರ ಭಾರಿ ಗಾತ್ರದ ಮರವೊಂದು ದಿಢೀರ್ ಬುಡ ಮೇಲಾಗಿ ಆಟೊ ಮೇಲೆ ಉರುಳಿ ಬಿದ್ದಿದ್ದು, ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಜಬೀನಾ, ಜುನೈದ್ಗೆ ಎಂಬುವರಿಗೆ ಸಣ್ಣಪುಟ್ಟ ಗಾಯವಾಗಿದೆ. ಮರ ಬಿದ್ದ ರಭಸಕ್ಕೆ ಆಟೊ ಸಂಪೂರ್ಣ ಜಖಂ ಆಗಿದ್ದು, ಕಾರಿಗೆ ಹಾನಿಯಾಗಿದೆ. ಮರ ಬೀಳುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಜಬೀನಾ ಮತ್ತು ಜುನೈದ್ ತನ್ಯ ಆಸ್ಪತ್ರೆ ಎದುರಿನ ಸ್ಕ್ಯಾನಿಂಗ್ ಸೆಂಟರ್ನಲ್ಲಿ ಪರೀಕ್ಷೆ ಮಾಡಿಸಲೆಂದು ಚಿಕ್ಕಮಗಳೂರಿನಿಂದ ಆಟೊದಲ್ಲಿ ಹಾಸನಕ್ಕೆ ಬಂದಿದ್ದರು.ಆಸ್ಪತ್ರೆಯಲ್ಲಿ ರಶೀದಿ ಪಡೆದು ಆಟೊದಲ್ಲಿ ಕುಳಿತು ತಮ್ಮ ಸರದಿಗಾಗಿ ಕಾಯುತ್ತಿರುವಾಗ ಈ ಘಟನೆ ನಡೆದಿದೆ.
ಗಾಯಾಳುಗಳನ್ನು ಚಿಕಿತ್ಸೆಗಾಗಿ ಹಾಸನದ ಹಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಬಡಾವಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಧಿಕಾರಿಗಳಿಗೆ ತರಾಟೆ: ಸುದ್ದಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ನಗರಸಭೆ ಅಧ್ಯಕ್ಷ ಆರ್.ಮೋಹನ್, ಅರಣ್ಯ ಇಲಾಖೆ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
‘ನಗರಸಭೆ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಜೋರು ಮಳೆಗೆ ಕೆಲವೆಡೆ ಹಳೆ ಕಾಲದ ಮರಗಳು ಮುರಿದು ಬಿದ್ದಿದ್ದವು. ಇದು ಮರುಕಳಿಸದಂತೆಮುಂಜಾಗ್ರತಾ ಕ್ರಮವಾಗಿ ಅರಣ್ಯ ಇಲಾಖೆಗೆ ಪತ್ರ ಬರೆದು ನಗರ ವ್ಯಾಪ್ತಿಯಲ್ಲಿ ಅಪಾಯಕಾರಿ ಮರಗಳನ್ನು ಗುರುತಿಸಿ ತಕ್ಷಣ ತೆರವುಗೊಳಿಸುವಂತೆ ಸೂಚನೆ ನೀಡಿದ್ದರೂ ಕ್ರಮ ಕೈಗೊಂಡಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಸಾರ್ವಜನಿಕರ ಪ್ರಾಣ ಹಾನಿ ಅಥವಾ ಆಸ್ತಿ- ಪಾಸ್ತಿ ನಷ್ಟ ಆಗದಂತೆ ತಕ್ಷಣವೇ ಹಳೆಯಮರಗಳನ್ನು ತೆರವು ಮಾಡಿ ಎಂದು 2021 ಜೂನ್, ಜುಲೈನಲ್ಲೇ ಹೇಳಿದ್ದರೂ, ಆನಿಟ್ಟಿನಲ್ಲಿ ಏಕೆ ಕ್ರಮ ಕೈಗೊಂಡಿಲ್ಲ’ ಎಂದು ಪ್ರಶ್ನಿಸಿದರು.
‘ಮರ ಬಿದ್ದಿರುವುದಕ್ಕೂ ಅರಣ್ಯ ಇಲಾಖೆಯ ನಿರ್ಲಕ್ಷ್ಯವೇ ಕಾರಣವಾಗಿದ್ದು, ಹೆಚ್ಚಿನ ಅನಾಹುತವಾಗಿದ್ದರೆ ಯಾರು ಹೊಣೆ? ಕೂಡಲೇ ಎಚ್ಚೆತ್ತು ಅಪಾಯಕಾರಿ ಮರಗಳನ್ನು ಪತ್ತೆ ಹಚ್ಚಿ ತೆರವುಗೊಳಿಸಬೇಕು’ ಎಂದು ತಾಕೀತು ಮಾಡಿದರು.