ಹೊಳೆನರಸೀಪುರ (ಹಾಸನ): ತಾಲ್ಲೂಕಿನ ಬೆಟ್ಟಸಾತೇನಹಳ್ಳಿ ಗ್ರಾಮದ ಎಂ.ಬಿ.ಪ್ರೀತಿ ಷಣ್ಮುಖ ಅವರು ವಿಶ್ವಸಂಸ್ಥೆ ಶಾಂತಿಪಾಲನಾ ಪಡೆಗೆ ಆಯ್ಕೆಯಾಗಿದ್ದಾರೆ.
ಎಂಟು ವರ್ಷಗಳಿಂದ ಅವರು ಭಾರತೀಯ ಸೇನೆಯಲ್ಲಿ ಕಮಾಂಡೆಂಟ್ ಆಗಿ ದೇಶ ರಕ್ಷಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಸೇನೆ ನಡೆಸುವ ರೈಫಲ್ ಶೂಟಿಂಗ್ ಆಯ್ಕೆ ಪರೀಕ್ಷೆಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿ ಶಾಂತಿಪಾಲನಾ ಪಡೆಯಲ್ಲಿ ಕಾರ್ಯನಿರ್ವಹಿಸಲು ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಈಗಾಗಲೇ ಕರ್ತವ್ಯಕ್ಕೆ ತೆರಳಿದ್ದಾರೆ.
ಪ್ರೀತಿ ಅವರಿಗೆ ಇಬ್ಬರು ಮಕ್ಕಳಿದ್ದು, ಪತಿ ಷಣ್ಮುಖ ಬೆಟ್ಟಸಾತೇನಹಳ್ಳಿ ಗ್ರಾಮದಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.