ರಾಮನಾಥಪುರ (ಕೊಣನೂರು): ವ್ಯವಸ್ಥೆಯನ್ನು ಸರಿಪಡಿಸಿ ಸರಿಯಾಗಿ ಕುಡಿಯುವ ನೀರು ಪೂರೈಸುವಂತೆ ಆಗ್ರಹಿಸಿದ ಮಹಿಳೆಯರು ಕೇರಳಾಪುರ ಗ್ರಾಮ ಪಂಚಾಯಿತಿ ಎದುರು ಮಂಗಳವಾರ ಖಾಲಿ ಕೊಡಗಳನ್ನು ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.
ಹೆಚ್ಚು ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ ಕುಡಿಯುವ ನೀರಿಗೆ ಅಭಾವ ಉಂಟಾಗಿದ್ದು ಗ್ರಾಮ ಪಂಚಾಯಿತಿ ನಿಷ್ಕ್ರಿಯವಾಗಿದೆ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.
‘ಪ್ರತಿ ತಿಂಗಳು 3 ರಿಂದ 4 ಬಾರಿ ನೀರು ಸರಬರಾಜು ಮಾಡುವ ಯಂತ್ರ ಕೆಟ್ಟಿದೆ, ಪೈಪ್ ಒಡೆದಿದೆ ಎಂಬ ನೆಪಗಳನ್ನು ಹೇಳಿಕೊಂಡು ಕುಡಿಯುವ ನೀರು ಸರಬರಾಜು ಮಾಡುತ್ತಿಲ್ಲ. ಪಂಚಾಯಿತಿ ಅಧಿಕಾರಿಗಳು, ಸದಸ್ಯರು ಸರಿಪಡಿಸುವ ಕಾರ್ಯ ಮಾಡಿಲ್ಲ’ ಎಂದು ದೂರಿದರು.
ಲೀಲಾವತಿ ಮಾತನಾಡಿ, ‘ಈ ಗ್ರಾಮ ಪಂಚಾಯಿತಿ ಇದ್ದು ಇಲ್ಲದಂತಾಗಿದೆ. ಇಲ್ಲಿಯ ನೌಕರ ವರ್ಗದವರ ಬೇಜವಾಬ್ದಾರಿ ಹೇಳ ತೀರದಾಗಿದೆ. ಪ್ರತಿಭಟನೆ ನಡೆಸುತ್ತಿದ್ದರೂ ನಮ್ಮ ಮನವಿ ಪತ್ರವನ್ನು ಸ್ವೀಕರಿಸಲೂ ಕಚೇರಿಯಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಇಲ್ಲ’ ಎಂದು ಆರೋಪಿಸಿದರು.
‘2-3 ದಿನದಲ್ಲಿ ನೀರಿನ ವ್ಯವಸ್ಥೆ ಸರಿಸಪಡಿಸಿ ಗ್ರಾಮದಲ್ಲಿ ಸ್ವಚ್ಛತೆ ಕಾಪಾಡದಿದ್ದರೆ ಗ್ರಾಮ ಪಂಚಾಯಿತಿ ಕಚೇರಿಗೆ ಬೀಗ ಜಡಿಯುವುದಾಗಿ’ ಎಚ್ಚರಿಸಿದರು.
ಗ್ರಾಮದ ಜಯಲಕ್ಷ್ಮೀ, ಲತಾ, ಪುಷ್ಪಾ, ರೂಪಾ, ರಾಜಮ್ಮ , ಶಶಿರೇಖಾ, ರಾಜಮ್ಮ, ವರಲಕ್ಷ್ಮೀ ಸೇರಿದಂತೆ ಹಲವರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.