ಹಾವೇರಿ: ನಗರದ ಇಜಾರಿಲಕಮಾಪುರದ ಯುವಕ ಮಂಡಳಿ ಅಜ್ಜಯ್ಯನ ಗುಡಿ ಎದುರಿಗೆ ಗುರುವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಹೋರಿ ಬೆದರಿಸುವ ಸ್ಪರ್ಧೆ ನೆರೆದಿದ್ದ ಪ್ರೇಕ್ಷಕರ ಮೈನವಿರೇಳಿಸುವಂತೆ ಮಾಡಿತು.
ಮೆಚ್ಚಿನ ಹೋರಿಯನ್ನು ಕಣ್ತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದರು. ಶಿಳ್ಳೆ, ಕೇಕೆ ಹಾಕುತ್ತಾ, ಹೋರ್ಷದ್ಗಾರ ಮಾಡುತ್ತಾ ಹೋರಿಯನ್ನು ಹುರಿದುಂಬಿಸುತ್ತಿದ್ದರು. ಹೋರಿಯ ಕೊರಳಿನಲ್ಲಿದ್ದ ಕೊಬ್ಬರಿಯನ್ನು ಹರಿಯಲು ಯುವಕರ ಗುಂಪು ಮುಗಿಬೀಳುತ್ತಿತ್ತು. ಕೆಲವು ಹೋರಿಗಳು ಜನರ ಗುಂಪನ್ನು ಭೇದಿಸುತ್ತಾ ನಾಗಾಲೋಟದಲ್ಲಿ ಮುನ್ನುಗ್ಗುತ್ತಿದ್ದವು.
ಬೆಳಿಗ್ಗೆಯಿಂದ ಸಂಜೆವರೆಗೆ ನಡೆದ ಸ್ಪರ್ಧೆಯಲ್ಲಿ ನೂರಾರು ಹೋರಿಗಳು ಭಾಗವಹಿಸಿದ್ದವು. ಕೆಲವು ಹೋರಿಗಳ ನೋಟಕ್ಕೆ ಪ್ರೇಕ್ಷಕರು ದಂಗಾದರು. ಸಾಹಸಿ ಯುವಕರು ಕೊಬ್ಬರಿ ಹೋರಿಗಳನ್ನು ಮಣಿಸಲು ಅಪಾಯವನ್ನು ಲೆಕ್ಕಿಸದೆ ಮುಗಿಬಿದ್ದರು.
ಹೋರಿಯೊಂದು ಪ್ರೇಕ್ಷಕರತ್ತ ನುಗ್ಗಿದ ಸಂದರ್ಭ ಟ್ರೇಲರ್ಗೆ ಬಡಿದು ಕೆಳಗೆ ಬಿದ್ದು ಗಾಯಗೊಂಡಿತು. ಈ ವೇಳೆ ಅಲ್ಲಿ ನೆರೆದಿದ್ದ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾದವು.
ಬಂಪರ್ ಬಹುಮಾನ:
ಸ್ಪರ್ಧೆಯಲ್ಲಿ ಗೆಲ್ಲುವ ಪಿಪಿ ಹೋರಿಗೆ ಹೀರೋ ಸ್ಪ್ಲೆಂಡರ್ ಬೈಕ್ ಅನ್ನು ಶಾಸಕ ನೆಹರು ಓಲೇಕಾರ ಹಾಗೂ ಗಗ್ಗರಿ ಹೋರಿಗೆ ಮಾಜಿ ಸಚಿವ ರುದ್ರಪ್ಪ ಲಮಾಣಿ ಹೀರೊ ಸ್ಪ್ಲೆಂಡರ್ ಬೈಕ್ ಅನ್ನು ಬಂಪರ್ ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದರು.
ಪ್ರಥಮ ಬಹುಮಾನ 10 ಗ್ರಾಂ ಬಂಗಾರ (ಎರಡು ಪಿಪಿ ಹೋರಿಗೆ ಮತ್ತು ಎರಡು ಗಗ್ಗರಿ ಹೋರಿಗೆ), ದ್ವಿತೀಯ ಬಹುಮಾನ 4 ಫ್ರಿಡ್ಜ್, ತೃತೀಯ ಬಹುಮಾನ 32 ಇಂಚಿನ ಎಲ್ಇಡಿ ಟಿವಿ, ನಾಲ್ಕನೇ ಬಹುಮಾನ ಟ್ರಜರಿ, ಐದನೇ ಬಹುಮಾನ ದಿವಾನ್ ಮಂಚವನ್ನು ವಿಜೇತ ಹೋರಿಗಳ ಮಾಲೀಕರಿಗೆ ನೀಡಲಾಯಿತು.
ಕಮಿಟಿಯ ವತಿಯಿಂದ ಉತ್ತಮ ಹೋರಿ ಹಿಡಿತಗಾರರಿಗೆ ಪ್ರಥಮ ಬಹುಮಾನ ₹25 ಸಾವಿರ, ದ್ವಿತೀಯ ಬಹುಮಾನ ₹15 ಸಾವಿರ ಹಾಗೂ ತೃತೀಯ ಬಹುಮಾನ ₹10 ಸಾವಿರವನ್ನು ನೀಡಲಾಯಿತು.