ಹಾವೇರಿ: ‘ಬೆಂಗಳೂರಿನಲ್ಲಿ ಫೆ.7ರಂದು ಎಸ್.ಟಿ. ಮೀಸಲಾತಿಗಾಗಿ ನಡೆಯುವ ‘ಕುರುಬರ ಹಕ್ಕೊತ್ತಾಯ ಸಮಾವೇಶ’ಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಾರದಿದ್ದರೆ ಸಮಾಜ ಅವರಿಗೆ ತಕ್ಕ ಪಾಠ ಕಲಿಸಲಿದೆ’ ಎಂದು ಹಾಲುಮತ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ರಾಜಣ್ಣ ಜಿ.ಗುಳಗುಳಿ ಎಚ್ಚರಿಕೆ ನೀಡಿದರು.
ಸಿದ್ದರಾಮಯ್ಯ ಅವರು ತಮ್ಮ ನಿಲುವಿನಲ್ಲಿ ಬದಲಾವಣೆ ಮಾಡಿಕೊಂಡು, ತಮ್ಮ ರಾಜಕೀಯ ಏಳಿಗೆಗಾಗಿ ಶ್ರಮಿಸಿದ ಸಮುದಾಯದ ಬೇಡಿಕೆಗೆ ಸೂಕ್ತವಾಗಿ ಸ್ಪಂದಿಸಬೇಕು ಎಂದು ಹಾಲುಮತ ಮಹಾಸಭಾ ಮನವಿ ಮಾಡಿಕೊಳ್ಳುತ್ತದೆ. ತಪ್ಪಿದಲ್ಲಿ ಸಿದ್ದರಾಮಯ್ಯ ಅವರ ನಿವಾಸದ ಮುಂದೆ ಮಹಾಸಭಾದ ಎಲ್ಲ ಜಿಲ್ಲಾ ಘಟಕಗಳ ವತಿಯಿಂದ ಸರಣಿಯಾಗಿ ಶಾಂತಿಯುತ ಧರಣಿ ನಡೆಸಲು ಹಿಂಜರಿಯುವುದಿಲ್ಲ ಎಂದು ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.
ಸಿದ್ದರಾಮಯ್ಯ, ಮಾಜಿ ಸಚಿವರಾದ ಎಚ್.ವೈ. ಮೇಟಿ, ಬಿ.ಬಿ. ಚಿಮ್ಮನಕಟ್ಟಿ ಮುಂತಾದ ಮುಖಂಡರು ಕುರುಬರ ಹೋರಾಟಕ್ಕೆ ಕೈ ಜೋಡಿಸಿಲ್ಲ. ಇವರೆಲ್ಲರೂ ಸಮಾವೇಶದಲ್ಲಿ ಪಾಲ್ಗೊಂಡು ಒಗ್ಗಟ್ಟು ಪ್ರದರ್ಶನ ಮಾಡಬೇಕು. ಇದು ಪಕ್ಷಾತೀತವಾಗಿ ನಡೆಯುತ್ತಿರುವ ಸಮಾವೇಶ ಎಂದು ತಿಳಿಸಿದರು.