ಹಾವೇರಿ: ಇಲ್ಲಿನ ನಗರಸಭೆ ಕಚೇರಿಯಲ್ಲಿ ಮಂಗಳವಾರ ₹15 ಸಾವಿರ ಲಂಚ ಪಡೆಯುವಾಗ ಪೌರಾಯುಕ್ತ ವಿ.ಎಂ.ಪೂಜಾರ ಮತ್ತು ಕಿರಿಯ ಆರೋಗ್ಯ ನಿರೀಕ್ಷಕ ಸೋಮಶೇಖರ ಮಲ್ಲಾಡದ ಈ ಇಬ್ಬರು ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಬಲೆಗೆ ಬಿದ್ದಿದ್ದಾರೆ.
ನಗರದ ಆಯ್ದ 15 ಸ್ಥಳಗಳಲ್ಲಿ ‘ಸ್ವಚ್ಛ ಭಾರತ ಯೋಜನೆ’ಯ ಜಾಗೃತಿ ಫಲಕಗಳನ್ನು ಅಳವಡಿಸಲು ದಾವಣಗೆರೆಯ ಗ್ಲೋಬಲ್ ವಿಂಗ್ ಸೊಸೈಟಿಗೆ ಟೆಂಡರ್ ನೀಡಲಾಗಿತ್ತು. ಕಾಮಗಾರಿ ಪೂರ್ಣಗೊಂಡ ನಂತರ, ಗುತ್ತಿಗೆದಾರರಿಗೆ ₹3 ಲಕ್ಷ ಟೆಂಡರ್ ಮೊತ್ತ ನೀಡಲು ₹15 ಸಾವಿರ ಲಂಚದ ಬೇಡಿಕೆ ಇಡಲಾಗಿತ್ತು.
ವಿ.ಎಂ.ಪೂಜಾರ, ಪೌರಾಯುಕ್ತ, ಹಾವೇರಿ ನಗರಸಭೆ
ಈ ಬಗ್ಗೆ ಗ್ಲೋಬಲ್ ವಿಂಗ್ ಸೊಸೈಟಿ ಮಾಲೀಕ ಅಣ್ಣಪ್ಪ ನಾಯ್ಕ ಹಾವೇರಿಯ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಮೇರೆಗೆ ಎಸಿಬಿ ಡಿವೈಎಸ್ಪಿ ಗೋಪಿ ಬಿ.ಆರ್. ನೇತೃತ್ವದ ತಂಡ ಮಂಗಳವಾರ ಸಂಜೆ 4.30ರ ವೇಳೆಗೆ ಯಶಸ್ವಿ ಕಾರ್ಯಾಚರಣೆ ನಡೆಸಿತು.
ದಾಖಲೆಗಳ ಪರಿಶೀಲನೆ ಮುಂದುವರಿದಿದ್ದು, ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗುವುದು ಎಂದು ಎಸಿಬಿ ಅಧಿಕಾರಿಗಳು ಮಾಹಿತಿ ನೀಡಿದರು.
ಲಂಚದ ಹಾವಳಿ:
ಹಾವೇರಿ ನಗರಸಭೆಯಲ್ಲಿ ಸಾರ್ವಜನಿಕರು ಯಾವುದೇ ಸೌಲಭ್ಯ ಪಡೆಯಲು ಮತ್ತು ಕೆಲಸ ಮಾಡಿಸಿಕೊಳ್ಳಲು ಲಂಚ ನೀಡಬೇಕಿದೆ. ನಗರಸಭೆ ಕಚೇರಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಸೋಮಶೇಖರ ಮಲ್ಲಾಡದ, ಕಿರಿಯ ಆರೋಗ್ಯ ನಿರೀಕ್ಷಕ, ಹಾವೇರಿ ನಗರಸಭೆ