ಹಾವೇರಿ: ‘ಮಹಾತ್ಮರ ಸ್ಮರಣೆ ಎಂದರೆ ಕೇವಲ ಅವರನ್ನು ನೆನಪಿಸಿಕೊಳ್ಳುವುದಲ್ಲ.ಅವರ ಆದರ್ಶ ಮಾರ್ಗದಲ್ಲಿ ನಡೆದು ಮೌಲ್ಯಗಳನ್ನು ರೂಢಿಸಿಕೊಳ್ಳುವುದು. ಲಿಂ. ಶಾಂತವೀರ ಪಟ್ಟಾಧ್ಯಕ್ಷರ ಸ್ಮರಣೆ ನಮ್ಮಲ್ಲಿ ಮಹಾನ್ ಬದಲಾವಣೆಗೆ ಕಾರಣವಾಗುತ್ತದೆ’ ಎಂದು ಶಿವಲಿಂಗೇಶ್ವರ ವಿರಕ್ತಮಠದ ಸದಾಶಿವ ಸ್ವಾಮೀಜಿ ಹೇಳಿದರು.
ನಗರದ ಸಿಂದಗಿಮಠದಲ್ಲಿ ಹಮ್ಮಿಕೊಂಡಿರುವ ಲಿಂ.ಶಾಂತವೀರ ಪಟ್ಟಾಧ್ಯಕ್ಷರ 41ನೇ ಪುಣ್ಯಸ್ಮರಣೋತ್ಸವದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂಸಾರದ ಜಂಟಾಟದಲ್ಲಿ ಮನಸ್ಸು ಹಗುರವಾಗಬೇಕಾದರೆ, ಸಿಂದಗಿ ಶಾಂತವೀರ ಪಟ್ಟಾಧ್ಯಕ್ಷರಂತಹ ಮಹಾನ್ ಚೇತನದ ಜೀವನ ಚರಿತ್ರೆಯ ಸ್ಮರಣೆ ಮಾಡಬೇಕು. ಇದರಿಂದ ಜೀವನೋತ್ಸಾಹ ಹೆಚ್ಚುತ್ತದೆ ಎಂದು ಹೇಳಿದರು.
ಕಲ್ಯಾಣದಲ್ಲಿ ಅನುಭವ ಮಂಟಪ ಸ್ಥಾಪಿಸುವ ಮೂಲಕ ಸಮಾಜದ ಎಲ್ಲಾ ಜನರಿಗೂ ಸಮಾಜೋಧಾರ್ಮಿಕ ಸಂಸತ್ತನ್ನು ಪರಿಚಯಿಸಿ, ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಕಲ್ಪಿಸಿದ ಬಸವಣ್ಣ ಈ ಜಗತ್ತಿನ ಮೊದಲ ಸಮಾಜ ಸುಧಾರಕರಾಗಿದ್ದಾರೆ ಎಂದು ಹೇಳಿದರು.
‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಮುರಗೋಡಿನ ಸಂಜುಬಸಯ್ಯ ಮತ್ತು ಸಂಗಡಿಗರು ಹಾಸ್ಯ ಕಾರ್ಯಕ್ರಮ ನಡೆಸಿಕೊಟ್ಟರು. ಶಾಮ್ ಕಲ್ಯಾಣ್ ಬೆನ್ನೂರ ಹಾಗೂ ಕುಟುಂಬದವರಿಂದ ಜಾನಪದ ಗೀತೆಗಳನ್ನು ಪ್ರಸ್ತುತ ಪಡಿಸಿದರು. ಗದುಗಿನ ಪಂ.ರಾಜಗುರು ಗುರುಸ್ವಾಮಿ ಕಲಕೇರಿ ಅವರನ್ನು ಶ್ರೀಮಠದಿಂದ ಸನ್ಮಾನಿಸಲಾಯಿತು.