ಹಾವೇರಿ: ಸರ್ಕಾರಿ ಕೆಲಸ ಮಾಡಿಕೊಡಲು ಹಿಂದೇಟು ಹಾಕುವುದು, ಲಂಚದ ಬೇಡಿಕೆ, ಅಕ್ರಮ ಸಂಪತ್ತು ಹೊಂದಿದವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ಕ್ಕೆ ದೂರು ನೀಡಿ ಎಂದು ಜಿಲ್ಲಾ ವಾರ್ತಾಧಿಕಾರಿ ಡಾ.ಬಿ.ಆರ್. ರಂಗನಾಥ ಕುಳಗಟ್ಟೆ ಹೇಳಿದರು.
ನಗರದ ಬಸ್ ನಿಲ್ದಾಣದಲ್ಲಿ ಭ್ರಷ್ಟಾಚಾರ ನಿಗ್ರಹ ದಳ ಗುರುವಾರ ಹಮ್ಮಿಕೊಂಡ ಬೀದಿ ನಾಟಕ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭ್ರಷ್ಟಾಚಾರದಲ್ಲಿ ತೊಡಗಿದವರು ಯಾವುದೇ ಜಾತಿ–ಧರ್ಮಕ್ಕೆ ಸಂಬಂಧಿಸಿದವರಲ್ಲ. ಹೀಗಾಗಿ, ಅಂತಹವರು ನಿಮ್ಮ ಸಂಬಂಧಿಕರೇ ಆಗಿದ್ದರೂ ದೂರು ನೀಡಿ. ಲಂಚ ಪಡೆಯುವಷ್ಟೇ ಕೊಡುವುದೂ ಅಪರಾಧವಾಗಿದೆ ಎಂದರು.
ಸರ್ಕಾರಿ ಕೆಲಸ ಮಾಡಿ ಕೊಡಲು ಹಿಂದೇಟು ಹಾಕುವ ಅಧಿಕಾರಿಗಳು, ಲಂಚಕ್ಕೆ ಬೇಡಿಕೆ ಇಡುವ ಅಧಿಕಾರಿಗಳಿಗೆ ಉಂಟಾಗುವ ಪರಿಸ್ಥಿತಿ ಹಾಗೂ ಶಿಕ್ಷೆ ಕುರಿತು ನಾಟಕದ ಮೂಲಕ ಜಾಗೃತಿ ಮೂಡಿಸಿದರು.ನಾಟಕದ ಬಗ್ಗೆ ಸಾರ್ವಜನಿಕರು ಮಾಹಿತಿಯನ್ನು ಕೇಳುತ್ತಿರುವ ದೃಶ್ಯಗಳು ಕಂಡುಬಂದವು.
ಈ ಬೀದಿ ನಾಟಕವು ಅತ್ಯುತ್ತಮ ಸಂದೇಶ ನೀಡುತ್ತಿದ್ದು, ಸಾರ್ವಕನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿದೆ ಎಂದು ಪ್ರಯಾಣಿಕ ಎಸ್. ಬಸವರಾಜ ಹೇಳಿದರು. ಎಸಿಬಿ ಇನ್ಸ್ಪೆಕ್ಟರ್ ಬಿ.ಕೆ.ಹಳಬಣ್ಣನವರ ಇದ್ದರು.