ಹಾವೇರಿ: ಶಾಶ್ವತ ಸೂರು ಸೌಲಭ್ಯ ಕಲ್ಪಿಸುವಂತೆ ನಗರದ ಶಾಂತಿನಗರದ ಅಲೆಮಾರಿ ಜನಾಂಗವಾದ ಸುಡುಗಾಡು ಸಿದ್ಧರ ತಂಡ ಮುಂಬೈಗೆ ತೆರಳಿ, ಚಿತ್ರನಟ ಸೋನು ಸೂದ್ ಅವರನ್ನು ಶುಕ್ರವಾರ ಭೇಟಿ ಮಾಡಿ, ಮನವಿ ಮಾಡಿದೆ.
‘ನಮ್ಮ ಅಲೆಮಾರಿ ಜನಾಂಗದ 40 ಕುಟುಂಬಗಳು ಸರ್ಕಾರಿ ಜಮೀನಿನಲ್ಲಿ ತಗಡಿನ ಶೀಟಿನ ಮನೆಗಳಲ್ಲಿ ವಾಸಿಸುತ್ತಿದ್ದೇವೆ. ಶಾಶ್ವತ ಸೂರಿಗಾಗಿ ಹಲವಾರು ವರ್ಷಗಳಿಂದ ನಗರಸಭೆ ಮತ್ತು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸುತ್ತಲೇ ಬಂದಿದ್ದೇವೆ. ತಾವು ನೆರವು ನೀಡಬೇಕು’ ಎಂದು ಅಲೆಮಾರಿ ಜನಾಂಗದ ಯುವಕರು ಮನವಿ ಮಾಡಿದರು.
ಸುಡುಗಾಡು ಸಿದ್ಧರ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸೋನು ಸೂದ್ ಅವರು ‘ಶಾಶ್ವತ ಸೂರು ಕಲ್ಪಿಸುವುದು ಕಷ್ಟ. ಆದರೆ, ನಿಮ್ಮ ಸಮುದಾಯಕ್ಕೆ ಅಗತ್ಯವಿರುವ ದಿನಸಿ, ಔಷಧ, ಆಸ್ಪತ್ರೆಯಲ್ಲಿ ಚಿಕಿತ್ಸೆ, ಮಕ್ಕಳಿಗೆ ಶೈಕ್ಷಣಿಕ ನೆರವು ನೀಡುತ್ತೇನೆ’ ಎಂದು ತಿಳಿಸಿದ್ದಾರೆ.
ಅಲೆಮಾರಿ ಜನಾಂಗದ ಶೆಟ್ಟಿ ವಿಭೂತಿ, ಗಂಗಾಧರ ಬಾದಗಿ, ಹುಸೇನಪ್ಪ ಬಾದಗಿ, ರವಿ ಬಾದಗಿ, ಕೋಮಾರಿ, ರಮೇಶ ಉಕ್ಕುಂದ ಮುಂಬೈಗೆ ತೆರಳಿದ ತಂಡದಲ್ಲಿದ್ದರು.