ಹಾವೇರಿ: ನಗರದಲ್ಲಿ ಹಗಲು ವೇಳೆ ಬೀಗ ಹಾಕಿದ ಮನೆಗಳಿಗೆ ನುಗ್ಗಿ ಕಳ್ಳತನ ಮಾಡುತ್ತಿದ್ದ ಮಹಿಳೆಯನ್ನು ಬಂಧಿಸಿ, ₹20 ಸಾವಿರ ನಗದು, ₹3.15 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ₹27,500 ಮೌಲ್ಯದ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜು ತಿಳಿಸಿದರು.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,ಕಲಬುರ್ಗಿಯ ಬಾಪುನಗರದ ನಿವಾಸಿ ಜಯಶ್ರೀ ಕನ್ವರ ಉಪಾಧ್ಯ (30) ಎಂಬುವರು ಬಂಧಿತ ಮಹಿಳೆ. ಮೂರು ಜೊತೆ ಬಂಗಾರದ ಕಿವಿ ರಿಂಗ್, ಬಂಗಾರದ ತಾಳಿ ಗುಂಡು, 10 ಗ್ರಾಂನ ಏಳು ಉಂಗುರ, 15 ಗ್ರಾಂ ಚಿನ್ನದ ಸರ, ನಾಲ್ಕು ಬಂಗಾರದ ಗಟ್ಟಿ ನಾಣ್ಯ, ಬೆಳ್ಳಿ ಕಾಲುಚೈನ್ ವಶಪಡಿಸಿಕೊಂಡಿದ್ದೇವೆ ಎಂದು ಹೇಳಿದರು.
ನಗರದಲ್ಲಿ ಮನೆ ಕಳ್ಳತನ ಪ್ರಕರಣಗಳು ಜಾಸ್ತಿಯಾದ ಹಿನ್ನೆಲೆಯಲ್ಲಿ ಇನ್ಸ್ಪೆಕ್ಟರ್ ಪ್ರಭಾವತಿ ಸಿ.ಶೇತಸನದಿ ನೇತೃತ್ವದಲ್ಲಿ ತಂಡವನ್ನು ರಚನೆ ಮಾಡಲಾಗಿತ್ತು. ಬುಧವಾರ ಶಿವಾಜಿನಗರ 1ನೇ ಕ್ರಾಸ್ನಲ್ಲಿ ಪ್ಲಾಸ್ಟಿಕ್ ಆಯುವ ವೇಷದಲ್ಲಿ ಸಂಶಯಾಸ್ಪದವಾಗಿ ನಿಂತಿದ್ದಳು. ಜತೆಗೆ ಆಕೆಯ ಬಳಿ ಕಬ್ಬಿಣದ ರಾಡ್ ಇದ್ದುದನ್ನು ಗಮನಿಸಿದ ಗಸ್ತು ತಿರುಗುತ್ತಿದ್ದ ಪೊಲೀಸರು ವಿಚಾರಣೆ ನಡೆಸಿದಾಗ ಪ್ರಕರಣ ಬಯಲಿಗೆ ಬಂದಿದೆ ಎಂದು ತಿಳಿಸಿದರು.