ಹಾವೇರಿ: ‘ಎಷ್ಟೇ ಉನ್ನತ ಶಿಕ್ಷಣ ಪಡೆದಿದ್ದರೂ ಸಹ ಆಡಳಿತದ ಹಿತದೃಷ್ಟಿಯಿಂದ ತರಬೇತಿ ಅಗತ್ಯವಾಗಿದೆ. ಅಧಿಕಾರಿಗಳು ಈ ಸೈಬರ್ ಸೆಕ್ಯುರಿಟಿ ಕಾರ್ಯಾಗಾರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಎ.ಎಚ್.ಜಮಖಾನೆ ಹೇಳಿದರು.
ಕೇಂದ್ರ ಸರ್ಕಾರದ ಎನ್.ಇ.ಜಿ.ಡಿ ಸಾಮರ್ಥ್ಯಾಭಿವೃದ್ಧಿ ಯೋಜನೆಯಡಿ ಮೈಸೂರು ಆಡಳಿತ ಸಂಸ್ಥೆ ಹಾಗೂ ಬೆಂಗಳೂರು ಇ-ಆಡಳಿತ ಕೇಂದ್ರದ ಸಹಯೋಗದಲ್ಲಿ ಶುಕ್ರವಾರ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಜಿಲ್ಲೆಯ ವಿವಿಧ ಇಲಾಖೆಗಳ ಗ್ರೂಪ್ ‘ಎ’ ವರ್ಗದ ಅಧಿಕಾರಿಗಳಿಗೆ ‘ಸೈಬರ್ ಸೆಕ್ಯುರಿಟಿ ಮತ್ತು ಇ-ಆಡಳಿತ’ ಕುರಿತು ವಿಶೇಷ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಗಳು ಹೆಚ್ಚಾಗಿದ್ದು, ಈ ಕುರಿತು ಜಾಗೃತರಾಗಿರುವುದು ಅಗತ್ಯವಾಗಿದೆ. ಜಾಲತಾಣ ಬಳಕೆಯಲ್ಲಿ ತಮ್ಮ ಖಾಸಗಿ ಮಾಹಿತಿಯನ್ನು ಹಂಚಿಕೊಳ್ಳಬಾರದು. ಆನ್ಲೈನ್ ಬ್ಯಾಂಕಿಂಗ್ ವ್ಯವಹಾರದಲ್ಲೂ ಸಹ ಅಷ್ಟೇ ಜಾಗರೂಕತೆಯಿಂದ ಬಳಕೆ ಮಾಡಬೇಕು ಎಂದು ಹೇಳಿದರು.
ನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕ ವಿಜಯ ಪಿರಾಪೂರ ಅವರು ಸೈಬರ್ ಸೆಕ್ಯೂರಿಟಿ ಬಗ್ಗೆ ಹಾಗೂ ಉಪನ್ಯಾಸಕ ಅರವಿಂದ ಐರಣಿ ಅವರು ಇ-ಆಡಳಿತ ಕುರಿತು ಉಪನ್ಯಾಸ ನೀಡಿದರು.
ಡಿ.ವೈ.ಎಸ್.ಪಿ. ವಿಜಯಮಾರ ಸಂತೋಷ್, ಜಿಲ್ಲಾ ಪಂಚಾಯಿತಿಯ ಕುಮಾರ ಮಣ್ಣವಡ್ಡರ, ಜಿಲ್ಲಾ ತರಬೇತಿ ಸಂಸ್ಥೆ ಪ್ರಾಚಾರ್ಯರಾದ ಎಂ.ಎಚ್.ಗಾಮನಗಟ್ಟಿ, ಪರಿಶಿಷ್ಟ ವರ್ಗಗಳ ಇಲಾಖೆ ಅಧಿಕಾರಿ ಪ್ರವೀಣ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜಪ್ಪ, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರ ಬರೇಗಾರ ಇದ್ದರು.