ಹಾವೇರಿ: ‘ಈಗಾಗಲೇ ರಾಜ್ಯದ 20 ಜಿಲ್ಲೆಗಳಿಗೆ ಭೇಟಿ ನೀಡಿದ್ದೇನೆ. ಮಾರ್ಚ್ ಮೊದಲ ವಾರದಲ್ಲಿ ಹುಬ್ಬಳ್ಳಿ, ಹಾವೇರಿ ಅಥವಾ ದಾವಣಗೆರೆಯಲ್ಲಿ ಹಿಂದುಳಿದ ವರ್ಗಗಳ ರಾಜ್ಯಮಟ್ಟದ ಸಮಾವೇಶ ಆಯೋಜಿಸಲಾಗುವುದು’ ಎಂದು ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗಗಳ ರಾಜ್ಯ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಹೇಳಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ,ರಾಜ್ಯದಲ್ಲಿರುವ ಹಿಂದುಳಿದ ಸಮಾಜದವರ ಶೇ 55ರಷ್ಟು ಮತಗಳು ಕಾಂಗ್ರೆಸ್ ಪರವಾಗಿದ್ದು, ಇತ್ತೀಚೆಗೆ ಕೆಲವು ಮತಗಳು ವಿಭಜನೆಗೊಂಡಿವೆ. ಅವುಗಳನ್ನು ಒಗ್ಗೂಡಿಸಬೇಕಾಗಿದ್ದು, ಈ ಹಿನ್ನೆಲೆಯಲ್ಲಿ ಪ್ರತಿ ಜಿಲ್ಲೆಗೂ ಭೇಟಿ ನೀಡಿ ಹಿಂದುಳಿದ ವರ್ಗಗಳ ಘಟಕಗಳಿಗೆ ಪದಾಧಿಕಾರಿಗಳ ನೇಮಿಸಲು ಸಭೆಗಳನ್ನು ಮಾಡಲಾಗುತ್ತಿದೆ.
ಹಿಂದುಳಿದ ವರ್ಗಗಳಲ್ಲಿನ ಸಣ್ಣಸಣ್ಣ ಸಮುದಾಯಗಳನ್ನು ಒಗ್ಗೂಡಿಸುವ ಮೂಲಕ ಈ ಸಮುದಾಯಗಳ ನಾಯಕರಿಗೆ ಪಕ್ಷದಲ್ಲಿ ಅಧಿಕಾರ ನೀಡಿ ಮುಂಚೂಣಿಗೆ ತರುವ ಉದ್ದೇಶ ಹೊಂದಲಾಗಿದೆ. ಕಾಂಗ್ರೆಸ್ ಸರ್ಕಾರ ರೈತರ ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್ ಕಲ್ಪಿಸಿತ್ತು. ಆದರೆ ಬಿಜೆಪಿ ಸರ್ಕಾರ ಈಗ ಮೀಟರ್ ಅಳವಡಿಸಲು ಮುಂದಾಗಿದೆ. ಮುಂದಿನ ದಿನಗಳಲ್ಲಿ ಬಿಲ್ ಪಾವತಿಸುವಂತೆ ರೈತರ ಮೇಲೆ ಒತ್ತಡ ಹಾಕುವ ಹುನ್ನಾರ ನಡೆಸಿದೆ ಎಂದು ದೂರಿದರು.
ರಾಜ್ಯ ಸರ್ಕಾರ ಕೇವಲ 3 ಜಿಲ್ಲೆಗಳ ರೈತರ ಭತ್ತ ಖರೀದಿಗೆ ಪ್ರೋತ್ಸಾಹ ಧನ ನೀಡುತ್ತಿದ್ದು, ಈ ಮೂಲಕ ರೈತರನ್ನು ಒಡೆದಾಳುವ ನೀತಿ ಅನುಸರಿಸುತ್ತಿದೆ. ಇದನ್ನು ಬಿಟ್ಟು ಎಲ್ಲ ಜಿಲ್ಲೆಗಳ ರೈತರಿಗೂ ಪ್ರೋತ್ಸಾಹ ಧನ ನೀಡಬೇಕು ಎಂದು ಆಗ್ರಹಿಸಿದರು.
ಆನಂದ್ಸಿಂಗ್ ಹೇಳಿಕೆಗೆ ತಿರುಗೇಟು:
‘ಕರ್ನಾಟಕ ತಾಯಿ ಇದ್ದಂತೆ. ಇಲ್ಲಿ ಎಲ್ಲ ತರಹದ ಮಕ್ಕಳಿರುತ್ತಾರೆ. ಪ್ರತ್ಯೇಕ ರಾಜ್ಯದ ಕೂಗು ಸರಿಯಲ್ಲ. ಜನ ನಿಮಗೆ ಅಧಿಕಾರ ನೀಡಿದ್ದಾರೆ. ಆ ಪ್ರಾಂತ್ಯಕ್ಕೆ ಅಭಿವೃದ್ಧಿ ನಿಟ್ಟಿನಲ್ಲಿ ಏನು ಮಾಡಬೇಕು ಎಂಬುದನ್ನು ಚಿಂತೆನೆ ಮಾಡಿ, ಮನೆ ಒಡೆಯುವ ಕೆಲಸ ಮಾಡಬೇಡಿ’ ಎಂದು ಸಚಿವ ಆನಂದಸಿಂಗ್ ಹೇಳಿಕೆಗೆ ಮಾಜಿ ಶಾಸಕ ಮಧು ಬಂಗಾರಪ್ಪ ತಿರುಗೇಟು ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಬಸವರಾಜ ಶಿವಣ್ಣವರ, ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಂ. ಹಿರೇಮಠ, ಮಾಜಿ ಶಾಸಕರಾದ ಅಜ್ಜಂಪೀರ್ ಖಾದ್ರಿ, ಯು.ಬಿ. ಬಣಕಾರ, ಐ.ಜಿ. ಸನದಿ, ಸೋಮಣ್ಣ ಬೇವಿನಮರದ, ಸಂಜೀವಕುಮಾರ ನೀರಲಗಿ, ಈರಪ್ಪ ಲಮಾಣಿ ಇದ್ದರು.