ರಾಣೆಬೆನ್ನೂರು (ಹಾವೇರಿ ಜಿಲ್ಲೆ): ತಾಲ್ಲೂಕಿನ ನೂಕಾಪುರ ಪ್ಲಾಟ್ನ ಅಂಗನವಾಡಿ ಕೇಂದ್ರದಲ್ಲಿ ಬುಧವಾರ ಕಳಪೆ ಮೊಟ್ಟೆ ಕಂಡು ಬಂದಿವೆ. ಅಡುಗೆ ಸಿಬ್ಬಂದಿ ಮೊಟ್ಟೆಯನ್ನು ಬೇಯಿಸಿದಾಗ ಮೊಟ್ಟೆ ಕೆಟ್ಟಿರುವುದು ಗೊತ್ತಾಗಿದೆ.
ನೂಕಾಪುರ ಗ್ರಾಮದಲ್ಲಿ ಕಟ್ಟಡ ಕಾರ್ಮಿಕರು, ರೈತರು ಹಾಗೂ ಕೂಲಿ ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಪೌಷ್ಟಿಕತೆ ಹೋಗಲಾಡಿಸಬೇಕಾದ ಕೋಳಿಮೊಟ್ಟೆಗಳು, ಮಕ್ಕಳು ಮತ್ತು ಗರ್ಭಿಣಿಯರ ಆರೋಗ್ಯಕ್ಕೆ ಕುತ್ತು ತರುತ್ತಿವೆ ಎಂದು ಗ್ರಾಮಸ್ಥರು ದೂರಿದ್ದಾರೆ.
‘ಕಳಪೆ ಮೊಟ್ಟೆ ಪೂರೈಕೆ ಮಾಡಿದವರನ್ನು ಕಪ್ಪು ಪಟ್ಟಿಗೆ ಸೇರಿಸಿಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರು ಅಧಿಕಾರಿಗಳಿಗೆ ಸೂಚಿಸಿದ್ದರೂ ರಾಣೆಬೆನ್ನೂರು ತಾಲ್ಲೂಕಿನಲ್ಲಿ ಇನ್ನೂ ಕಳಪೆ ಮೊಟ್ಟೆ ವಿತರಣೆ ಮಾಡಲಾಗುತ್ತಿದೆ’ ಎಂದು ನೂಕಾಪುರದ ಹನುಮಂತ ಚವ್ವಾಣ ದೂರಿದರು.
ಸಿಡಿಪಿಒ ಪಾರ್ವತಿ ಹುಂಡೇಕಾರ ಮಾತನಾಡಿ, ‘ಈಗಾಗಲೇ ಪೂರೈಕೆಯಾದ ಮೊಟ್ಟೆಗಳನ್ನು ವಿತರಣೆ ಮಾಡಬಾರದು ಎಂದು ಎಲ್ಲ ಕೇಂದ್ರಗಳಿಗೆ ಸೂಚಿಸಲಾಗಿದೆ. ಗುತ್ತಿಗೆದಾರರಿಗೆ ಬೇರೆ ಮೊಟ್ಟೆಗಳನ್ನು ಪೂರೈಕೆ ಮಾಡಲು ಆದೇಶಿಸಲಾಗಿದೆ. ನೂಕಾಪುರ ಅಂಗನವಾಡಿ ಕೇಂದ್ರ ಕಾರ್ಯಕರ್ತೆ ಬುಧವಾರ ಸಿಡಿಪಿಒ ಕಚೇರಿಯಲ್ಲಿ ನಡೆದ ಸಭೆಗೆ ಹಾಜರಾಗಿದ್ದರು. ಅಡುಗೆ ಸಹಾಯಕರಿಂದ ಈ ಪ್ರಮಾದ ನಡೆದಿದೆ. ತಾಲ್ಲೂಕಿನ ಎರಡು ವೃತ್ತಗಳಲ್ಲಿ ಬೇರೆ ಮೊಟ್ಟೆಗಳನ್ನು ಗುತ್ತಿಗೆದಾರರು ಪೂರೈಸಿದ್ದು, ಕೆಲವೇ ದಿನಗಳಲ್ಲಿ ಎಲ್ಲ ಕೇಂದ್ರಗಳಿಗೆ ಬೇರೆ ಮೊಟ್ಟೆ ಪೂರೈಸಲಾಗುವುದು’ ಎಂದು ಪ್ರಜಾವಾಣಿಗೆ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.