ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಏಲಕ್ಕಿ ಕಂಪಿನ ನಗರಿ’ಯಲ್ಲಿ ಬಕ್ರೀದ್‌ ಸರಳ ಆಚರಣೆ

Last Updated 21 ಜುಲೈ 2021, 6:29 IST
ಅಕ್ಷರ ಗಾತ್ರ

ಹಾವೇರಿ: ಬಡವ–ಶ್ರೀಮಂತ, ಮೇಲು–ಕೀಳು ಎಂಬ ಅಂತರವನ್ನು ಅಳಿಸಿ, ವಿಶ್ವಭ್ರಾತೃತ್ವದ ಕಲ್ಪನೆ ಮೂಡಿಸುವ ಬಕ್ರೀದ್‌ ಹಬ್ಬವನ್ನು ‘ಏಲಕ್ಕಿ ಕಂಪಿನ ನಗರಿ’ ಹಾವೇರಿ ಸೇರಿದಂತೆ ಜಿಲ್ಲೆಯಾದ್ಯಂತ ಮುಸ್ಲಿಮರು ಶ್ರದ್ಧಾಭಕ್ತಿಯಿಂದ ಆಚರಿಸಿದರು.

ಪ್ರವಾದಿ ಇಬ್ರಾಹಿಮರು ತಮ್ಮ ಮಗನಾದ ಇಸ್ಮಾಯಿಲ್‌ರನ್ನು ಸೃಷ್ಟಿಕರ್ತ ಅಲ್ಲಾಹನಿಗೆ ಬಲಿ ಕೊಡಲು ಮುಂದಾದ ದಿನವನ್ನು ‘ಈದ್-ಉಲ್-ಅದಾ’ ಅರ್ಥಾತ್ ‘ಬಕ್ರೀದ್’ ಎನ್ನಲಾಗುತ್ತದೆ.

ಕೋವಿಡ್‌ ಕಾರಣದಿಂದ ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ಜಿಲ್ಲಾಡಳಿತ ನಿಷೇಧಿಸಿತ್ತು. ಮಸೀದಿಗಳಲ್ಲಿ ಶೇ 50ರಷ್ಟು ಮಂದಿ ಕೋವಿಡ್‌ ಮಾರ್ಗಸೂಚಿ ಪಾಲಿಸಿ, ಸಾಮೂಹಿಕ ಪ್ರಾರ್ಥನೆ ಮಾಡಲು ಅವಕಾಶ ಕಲ್ಪಿಸಲಾಗಿತ್ತು.

ನಗರದ ‘ಹಾಸ್ಮಿ ಮಜೀದ್’, ನೂರಾನಿ ಮಸೀದಿ ಸೇರಿದಂತೆ ವಿವಿಧ ಮಸೀದಿಗಳಿಗೆ ತೆರಳಿದ ಮುಸ್ಲಿಮರು, ಅಂತರ ಕಾಯ್ದುಕೊಂಡು ಪ್ರಾರ್ಥನೆ ಸಲ್ಲಿಸಿದರು. ಮಕ್ಕಳು ಹೊಸಬಟ್ಟೆ ಧರಿಸಿ, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

ಮನೆಗಳಲ್ಲಿ ಮಹಿಳೆಯರು ಚಿಕನ್‌ ಬಿರಿಯಾನಿ, ಮಟನ್‌ ಬಿರಿಯಾನಿ, ಸುರ್‌ಕುಂಬಾ (ಶ್ಯಾವಿಗೆ ಪಾಯಸ) ಮುಂತಾದ ಖಾದ್ಯಗಳನ್ನು ತಯಾರಿಸುತ್ತಿದ್ದ ದೃಶ್ಯ ಕಂಡು ಬಂದಿತು. ಅಕ್ಕಪಕ್ಕದ ಜನರಿಗೂ ಹಂಚಿ, ಮಧ್ಯಾಹ್ನ ಎಲ್ಲ ಬಾಂಧವರು ಒಟ್ಟಿಗೆ ಸೇರಿ ಊಟ ಮಾಡುತ್ತೇವೆ ಎಂದು ನಾಗೇಂದ್ರನಮಟ್ಟಿಯ ನಿವಾಸಿಗಳು ಹೇಳಿದರು.

ತ್ಯಾಗ, ಬಲಿದಾನದ ಸಂಕೇತವಾಗಿರುವ ಬಕ್ರೀದ್ ಅಂಗವಾಗಿಕುರಿ, ಮೇಕೆಗಳನ್ನು ‘ಖುರ್ಬಾನಿ’ (ಬಲಿದಾನ) ಕೊಟ್ಟರು.ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಈದ್ಗಾ ಮತ್ತು ಮಸೀದಿಗಳ ಸುತ್ತಮುತ್ತ ಪೊಲೀಸರು ಬಿಗಿ ಬಂದೋಬಸ್ತ್‌ ಒದಗಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT