ಹಾವೇರಿ: ಹುಬ್ಬಳ್ಳಿಯಿಂದ ಬೆಂಗಳೂರು ಕಡೆ ಚಲಿಸುತ್ತಿದ್ದ ಜನಶತಾಬ್ದಿ ರೈಲಿಗೆ ತಾಲ್ಲೂಕಿನ ನೆಲೋಗಲ್ಲ ಗ್ರಾಮದ ಸಮೀಪ ಗುರುವಾರ ಮಧ್ಯಾಹ್ನ 3.30ರ ಸಮಯದಲ್ಲಿ ಬೈಕ್ ಸಿಲುಕಿ ನಜ್ಜುಗುಜ್ಜಾಗಿದೆ. ಬೈಕ್ ಸವಾರ ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾನೆ.
ರೈಲು ಬರುವ ವೇಳೆ ಹಳಿ ದಾಟಲು ಬೈಕ್ ಸವಾರ ಪ್ರಯತ್ನಿಸಿದ್ದಾನೆ. ಆದರೆ ಶರವೇಗದಲ್ಲಿ ಬಂದ ರೈಲು ಡಿಕ್ಕಿ ಹೊಡೆಯುತ್ತದೆ ಎಂಬುದನ್ನು ಅರಿತ ಯುವಕ ಬೈಕ್ ಬಿಟ್ಟು ಹಳಿಯಿಂದ ಪಕ್ಕಕ್ಕೆ ಜಿಗಿದು ಪರಾರಿಯಾಗಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಘಟನಾ ಸ್ಥಳದಲ್ಲಿ ಕೆಲ ನಿಮಿಷ ನಿಂತಿದ್ದ ರೈಲು, ನಂತರ ಪಯಣ ಆರಂಭಿಸಿದೆ.ಘಟನಾ ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಪಾರಾದ ಯುವಕನ ಬಗ್ಗೆ ಇದುವರೆಗೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ.