ಸವಣೂರ: ಅಕಾಲಿಕ ಮಳೆಯಿಂದ ಕುಸಿದಿರುವ ಮನೆಗಳನ್ನು ‘ಸಿ’ ವರ್ಗ ಎಂದು ಗುರುತಿಸಲಾಗಿದ್ದು, ಅವುಗಳನ್ನು ‘ಬಿ’ ವರ್ಗಕ್ಕೆ ಸೇರ್ಪಡೆ ಮಾಡುವಂತೆ ಒತ್ತಾಯಿಸಿ ತಾಲ್ಲೂಕಿನ ಹುರಳಿಕುಪ್ಪಿ ಗ್ರಾಮಸ್ಥರು ಗ್ರಾಮ ಪಂಚಾಯ್ತಿ ಕಚೇರಿಗೆ ಬೀಗಹಾಕಿ ಕಂದಾಯ ಇಲಾಖೆಗೆ ಆಗಮಿಸಿ ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ ಅವರಿಗೆ ಮನವಿಯನ್ನು ಸಲ್ಲಿಸಿದರು.
ಅಕಾಲಿಕ ಮಳೆಗೆ ಹುರಳಿಕುಪ್ಪಿ ಗ್ರಾಮದಲ್ಲಿ ಕುಸಿದಿರುವ ಮನೆಗಳ ಪರಿಹಾರಕ್ಕೆ ಸಂಬಂಧಿಸಿದಂತೆ ಪರಿಹಾರ ನೀಡಲು ಸಮರ್ಪಕ ದಾಖಲೆಗಳನ್ನು ಸಲ್ಲಿಸಲಾಗಿದೆ.
ಪಿಡಿಒ ಬೋಜರಾಜ ಲಮಾಣಿ, ಗ್ರಾಮಲೆಕ್ಕಾಧಿಕಾರಿ ಭರತ ಹಾಗೂ ಎಂಜಿನಿಯರ್ ಈಶ್ವರಪ್ಪ ಅವರು ಈಗಾಗಲೇ ಪರಿಶೀಲನೆ ನಡೆಸಿದ್ದಾರೆ. ಆದರೆ, ಅರ್ಹರಿಗೆ ಪರಿಹಾರ ನೀಡದೆ ಲಂಚ ನೀಡಿದವರಿಗೆ ಮಾತ್ರ ಪರಿಹಾರ ನೀಡಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದರು.
ಅರ್ಹತೆ ಇದ್ದರೂ ಹಣ ನೀಡಿಲ್ಲ ಎನ್ನುವ ಕಾರಣಕ್ಕೆ ಕಡಿಮೆ ಗ್ರೇಡ್ ನೀಡಲಾಗಿದೆ. ಅರ್ಹರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಮನವಿ ಮಾಡಿದರು.
ಉಪ ವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ ಹಾಗೂ ತಹಶೀಲ್ದಾರ್ ಅನಿಲಕುಮಾರ ಜಿ. ಮನವಿ ಸ್ವೀಕರಿಸಿ ಮಾತನಾಡಿದರು.
‘ಮನೆ ಹಾನಿ ಪರಿಹಾರಕ್ಕೆ ಸಲ್ಲಿಕೆ ಆಗಿರುವ ಅರ್ಜಿಗಳ ಆಧಾರದ ಮೇಲೆ ಮರು ಸಮೀಕ್ಷೆ ಮಾಡಲಾಗುವುದು.ತಪ್ಪಿತಸ್ಥ ಆರು ಅಧಿಕಾರಿಗಳವಿರುದ್ಧ ಈಗಾಗಲೇ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಉಪ ವಿಭಾಗದ ವ್ಯಾಪ್ತಿಯ ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ರಚಿಸಿರುವ ಪ್ರಕೃತಿ ವಿಕೋಪ ವೀಕ್ಷಣೆ ತಂಡದ ಕಾರ್ಯದ ಬಗ್ಗೆ ಅನುಮಾನ ಬಂದರೆ, ತಹಶೀಲ್ದಾರ್ ಅವರಿಗೆ ಮನವಿಯನ್ನು ಸಲ್ಲಿಸಬೇಕು’ ಎಂದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷ ಶಂಕರಪ್ಪ ಕಳ್ಳಿಮನಿ, ಸದಸ್ಯ ಮುಜಾಹೀದ ದಿವಾಬ ಸಾಬನವರ, ಸಂತೋಷ ಮ್ಯಾಗೇರ, ಯಲ್ಲಪ್ಪ ದೇವಗೇರಿ, ಫಕ್ಕಿರೇಶ ಸಂದ್ಲಿ, ಪ್ರಮುಖರಾದ ಯಲ್ಲಪ್ಪ ಮ್ಯಾಗೇರಿ, ಮಲ್ಲೇಶಪ್ಪ ಹರಿಜನ, ನೀಲಕಂಠಪ್ಪ ಮ್ಯಾಗೇರಿ, ನಿಂಗಪ್ಪ ದೊಡ್ಡಮನಿ ಇದ್ದರು.