ಬೆಂಗಳೂರು: ‘ಹೈಕೋರ್ಟ್ನ ಭದ್ರತೆಗೆ ಪೊಲೀಸ್ ಸಿಬ್ಬಂದಿಯ ಕೊರತೆ ಇದೆ’ ಎಂದು ಹೆಸರು ಹೇಳಲು ಇಚ್ಛಿಸದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಈ ಕುರಿತಂತೆ ಬುಧವಾರ ‘ಪ್ರಜಾವಾಣಿ‘ಗೆ ಪ್ರತಿಕ್ರಿಯಿಸಿದ ಅವರು, ‘ಈ ವಿಷಯವನ್ನು ಈಗಾಗಲೇ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಇವೆಲ್ಲಾ ಮಾಧ್ಯಮದಲ್ಲಿ ಪ್ರಕಟವಾಗುವುದು ಬೇಡ’ ಎಂದು ತಿಳಿಸಿದರು.
ಬುಧವಾರ ಮಧ್ಯಾಹ್ನ ಕೋರ್ಟ್ ಹಾಲ್ 21ರಲ್ಲಿ ಮೊಹಮದ್ ನಲಪಾಡ್ ಹ್ಯಾರಿಸ್ ಜಾಮೀನು ಅರ್ಜಿ ವಿಚಾರಣೆ ನಡೆಯುತ್ತಿತ್ತು. ಈ ವೇಳೆ ಕೋರ್ಟ್ ಹಾಲ್ನಲ್ಲಿ ವಕೀಲರು ಮತ್ತು ಪತ್ರಕರ್ತರು ಕಿಕ್ಕಿರಿದು ತುಂಬಿದ್ದರು. ಇದೇ ಸಮಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಲೋಕಾಯುಕ್ತರ ಮೇಲೆ ಹಲ್ಲೆ ನಡೆದ ವಿಷಯ ಹರಿದಾಡುತ್ತಿತ್ತು. ಆಗ ಕೋರ್ಟ್ ಹಾಲ್ ಹೊರಗೆ ಹೆಚ್ಚಿನ ಪೊಲೀಸ್ ಸಿಬ್ಬಂದಿ ಹಾಜರಿದ್ದರು.
ಕೊರತೆ ಇದೆ: ಈ ಕುರಿತಂತೆ ಪ್ರತಿಕ್ರಿಯಿಸಿದ ವಕೀಲ ಎನ್.ಪಿ.ಅಮೃತೇಶ್, ‘ಹೈಕೋರ್ಟ್ನ ಐದು ಗೇಟುಗಳಲ್ಲೂ ಲೋಹ ಶೋ ಧಕ ಯಂತ್ರಗಳನ್ನು ಇರಿಸಲಾಗಿದೆ. ಆದರೆ, ಆಗಾಗ್ಗೆ ಇವು ಕೆಟ್ಟು ಹೋಗುತ್ತಲೇ ಇರುತ್ತವೆ. ಸಿಬ್ಬಂದಿ ಕೊರತೆಯೂ ಸಾಕಷ್ಟು ಇದೆ’ ಎಂದರು.
‘ಲೋಹ ಶೋಧಕ ಯಂತ್ರಗಳೆಲ್ಲಾ ಯಾವಾಗಲೂ ಕೆಟ್ಟಿರುತ್ತವೆ. ಸಿಬ್ಬಂದಿ ತಮ್ಮ ಕೈಗಳಲ್ಲೇ ಶೋಧಕ ಯಂತ್ರ ಹಿಡಿದು ಪರೀಕ್ಷಿಸಿ ಒಳಬರುವವರನ್ನು ಬಿಡುತ್ತಾರೆ’ ಎಂದು ಅಮೃತೇಶ್ ತಿಳಿಸಿದರು.