ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿ.ಪಂ: ಸಿ.ಎಂ. ಉದಾಸಿ ಹೆಸರೂ ರದ್ದು!

ಸಿ.ಎಂ. ಉದಾಸಿ ವರ್ಸಸ್‌ ಕೆ.ಬಿ. ಕೋಳಿವಾಡ ಬೆಂಬಲಿಗರ ನಾಮಕರಣ ರಾಜಕೀಯ
Last Updated 12 ಡಿಸೆಂಬರ್ 2018, 15:38 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲಾ ಪಂಚಾಯ್ತಿ ಕಟ್ಟಡಗಳಿಗೆ ‘ನಾಮಕರಣ’ ಮಾಡುವ ಕಾಂಗ್ರೆಸ್‌– ಬಿಜೆಪಿ ರಾಜಕೀಯವು ಹೊಸ ತಿರುವು ಪಡೆದುಕೊಂಡಿದ್ದು, ಸಭಾ ಭವನಕ್ಕೆ ‘ಸಿ.ಎಂ. ಉದಾಸಿ’ ಹೆಸರು ನಾಮಕರಣ ಮಾಡಿದ್ದ ಠರಾವನ್ನು ರದ್ದುಪಡಿಸುವಂತೆ ಸರ್ಕಾರ ಆದೇಶಿಸಿದೆ.

ಜಿಲ್ಲಾ ಪಂಚಾಯ್ತಿಯ ಸಭಾಭವನಕ್ಕೆ ಶಾಸಕ ಸಿ.ಎಂ. ಉದಾಸಿ ಹೆಸರನ್ನು ನಾಮಕರಣ ಮಾಡಿ, 2017ರ ಜುಲೈ 21ರಂದು ಅಂದಿನ ಸಾಮಾನ್ಯ ಸಭೆಯು ನಿರ್ಣಯ ಅಂಗೀಕರಿಸಿತ್ತು. ಆ ಬಳಿಕ ಹೆಸರನ್ನು ಇಡಲಾಗಿತ್ತು. ಆದರೆ, ಈ ಕುರಿತು ರಾಣೆಬೆನ್ನೂರಿನ ಏಕನಾಥ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು.ಸರ್ಕಾರಿ ಕಟ್ಟಡಗಳಿಗೆ ಚುನಾಯಿತ ಜನಪ್ರತಿನಿಧಿಗಳ ಹೆಸರನ್ನು ನಾಮಕರಣ ಮಾಡಲು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್‌ ಅಧಿನಿಯಮ –1993ರ ಅಡಿಯಲ್ಲಿ ಅವಕಾಶ ಇಲ್ಲದಿರುವುದನ್ನು ಪರಿಗಣಿಸಿದ ಸರ್ಕಾರವು,ನ್ಯಾಯಾಲಯದ ನಿರ್ದೇಶನದ ಕಾರಣ ನಾಮಕರಣ ರದ್ದುಪಡಿಸಿದೆ.

‘ಸರ್ಕಾರದ ನಿರ್ದೇಶನದಂತೆ ಪಂಚಾಯತ್‌ ರಾಜ್ ಇಲಾಖೆಯ ಪತ್ರವನ್ನು ಮುಂದಿನ ಸಾಮಾನ್ಯ ಸಭೆಯಲ್ಲಿಟ್ಟು, ಅಂಗೀಕರಿಸಲಾಗುವುದು’ ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಎಸ್‌.ಕೆ. ಕರಿಯಣ್ಣನವರ ‘ಪ್ರಜಾವಾಣಿ’ಗೆ ತಿಳಿಸಿದರು.

ಕೋಳಿವಾಡ:
‘ಸಿ.ಎಂ. ಉದಾಸಿ ಸಭಾಭವನ’ ಹೆಸರಿನ ಮಾದರಿಯಲ್ಲೇ, ಜಿಲ್ಲಾ ಪಂಚಾಯ್ತಿಯ ನೂತನ ಆಡಳಿತ ಕಚೇರಿಗೆ ಅಂದಿನ ವಿಧಾನ ಸಭಾ ಅಧ್ಯಕ್ಷ ಕೆ.ಬಿ. ಕೋಳಿವಾಡ ಹೆಸರನ್ನು ನಾಮಕರಣ ಮಾಡಬೇಕು ಎಂದು ಕಾಂಗ್ರೆಸ್‌ ಪಕ್ಷದಲ್ಲಿರುವ ಅವರ ಬೆಂಬಲಿಗರು 2017ರ ಮೇ 15ರಂದು ನಡೆದ ಸಾಮಾನ್ಯ ಸಭೆಯಲ್ಲಿ ಪಟ್ಟು ಹಿಡಿದಿದ್ದರು. ಇದಕ್ಕೆ ಬಿಜೆಪಿ ಸದಸ್ಯರು ತೀವ್ರ ಪ್ರತಿರೋಧ ಮಾಡಿದ್ದರು.

ಇದರಿಂದ ಇಕ್ಕಟಿಗೆ ಸಿಲುಕಿದ ಸಿಇಒ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಗೆ ಪತ್ರ ಬರೆದಿದ್ದರು. ಆದರೆ, ಸ್ಪಷ್ಟ ಉತ್ತರ ಬಂದಿರಲಿಲ್ಲ. ಕೊನೆಗೂ ಬಹುಮತ ಹೊಂದಿದ್ದ ಕಾಂಗ್ರೆಸ್‌ ಸದಸ್ಯರು, 2017ರ ಅಕ್ಟೋಬರ್ 28ರಂದು ನಡೆದ ಸಾಮಾನ್ಯ ಸಭೆಯಲ್ಲಿ ನಾಮಕರಣದ ನಿರ್ಣಯ ಅಂಗೀಕರಿಸಿದ್ದರು. ಈ ನಾಮಕರಣವನ್ನು ರದ್ದು ಪಡಿಸುವಂತೆ ಬಿಜೆಪಿ ಸದಸ್ಯರು ಪಟ್ಟು ಹಿಡಿದಿದ್ದರು.ನ್ಯಾಯಾಲಯದ ನಿರ್ದೇಶನದ ಹಿನ್ನೆಲೆಯಲ್ಲಿ ಹೆಸರು ತೆಗೆಯುವಂತೆ ಸರ್ಕಾರ ಸೂಚಿಸಿತ್ತು.

ಈ ಆದೇಶದ ಬೆನ್ನಲ್ಲೇ ಕಾಂಗ್ರೆಸ್ ಬೆಂಬಲಿಗರು, ಸಭಾಭವನಕ್ಕೆ ಇರಿಸಿದ ‘ಸಿ.ಎಂ. ಉದಾಸಿ’ ಹೆಸರನ್ನೂ ರದ್ದು ಪಡಿಸುವಂತೆ ನ್ಯಾಯಾಲಯದ ಮೆಟ್ಟಿಲೇರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT