ಹಾವೇರಿ: ಮೂವತ್ತು ವರ್ಷಗಳ ಹಿಂದೆ ರಚನೆಯಾಗಿರುವ ರಾಣೆಬೆನ್ನೂರುತಾಲ್ಲೂಕು ಕರೂರ ಜಿಲ್ಲಾ ಪಂಚಾಯಿತಿ ಕ್ಷೇತ್ರವನ್ನು ರದ್ದುಗೊಳಿಸಿರುವುದನ್ನು ಖಂಡಿಸಿ ಸಾರ್ವಜನಿಕರು ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.
ಕರೂರ ಗ್ರಾಮದ ಯುವ ಮುಖಂಡ ಸುಲ್ತಾನ ದೊಡ್ಡಮನಿ, ಕರೂರ ಜಿಲ್ಲಾ ಪಂಚಾಯಿತಿ ಕ್ಷೇತ್ರವನ್ನು ರದ್ದುಗೊಳಿಸಿರುವ ಚುನಾವಣಾ ಅಧಿಕಾರಿಗಳ ಕ್ರಮ ಸರಿಯಲ್ಲ. ಕರೂರ ಗ್ರಾಮ 11 ಸಾವಿರ ಜನಸಂಖ್ಯೆ ಹೊಂದಿದೆ. ರೈಲ್ವೆ ನಿಲ್ದಾಣ ಬೀಜೋತ್ಪಾದನಾ ಕೇಂದ್ರ ಸೇರಿದಂತೆ ಭೌಗೋಳಿಕವಾಗಿ ಮಧ್ಯ ಭಾಗದಲ್ಲಿದ್ದರೂ ಕೂಡಾ ಸದರಿ ಕ್ಷೇತ್ರವನ್ನು ರದ್ದುಪಡಿಸುವುದರ ಹಿಂದೆ ರಾಜಕೀಯ ಹಿತಾಸಕ್ತಿ ಅಡಗಿದೆ ಎಂದು ದೂರಿದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮುಡದೇವಣ್ಣನವರ, ‘ಯಾವುದೇ ಕಾರಣಕ್ಕೂ ನಮ್ಮ ಕ್ಷೇತ್ರವನ್ನು ವಿಂಗಡಿಸದೇ ಯಥಾಸ್ಥಿತಿ ಕಾಪಾಡಬೇಕು. ಇದರಲ್ಲಿ ಏನಾದರೂ ಬದಲಾವಣೆ ಆದರೆ ಹೋರಾಟವನ್ನು ತೀವ್ರಗೊಳಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.