ಅಕ್ಕಿಆಲೂರ: ಬಿಜೆಪಿರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಕ್ಷೇತ್ರದಲ್ಲಿ ಮತಬೇಟೆ ನಡೆಸಿದರು. ಮಂಗಳವಾರ ಉಪ್ಪಣಸಿ, ಕೂಸನೂರು, ಅಕ್ಕಿಆಲೂರು, ಶಿರಗೋಡ, ಗೊಂದಿ, ಮಲಗುಂದ ಸೇರಿದಂತೆ ಹಲವು ಗ್ರಾಮಗಳಲ್ಲಿ ರೋಡ್ ಶೋ ನಡೆಸಿದರು.
ಕ್ಷೇತ್ರದ ಯುವ ಕಾರ್ಯಕರ್ತರಲ್ಲಿ ಉತ್ಸಾಹ ಇರುವುದನ್ನು ಕಾಣುತ್ತಿದ್ದೇನೆ. ಕಾಂಗ್ರೆಸ್ ಏನೇ ಅಪಪ್ರಚಾರ ನಡೆಸಿದರೂ ಪ್ರಯೋಜನವಾಗುವುದಿಲ್ಲ. ಶಿವರಾಜ ಸಜ್ಜನರ ಗೆಲ್ಲಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ದೇಶ ಮತ್ತು ರಾಜ್ಯಕ್ಕೆ ಬಿಜೆಪಿ ಸಮರ್ಥ ನಾಯಕತ್ವ ನೀಡಿದೆ. ಬಿಜೆಪಿ ನೇತೃತ್ವದಲ್ಲಿ ಅಭಿವೃದ್ಧಿ ಕಾರ್ಯಗಳು ಅನುಷ್ಠಾನಗೊಂಡಿವೆ. ಹಿಂದೆ ಬಿ.ಎಸ್.ಯಡಿಯೂರಪ್ಪ ಸರ್ಕಾರ ಅಧಿಕಾರದಲ್ಲಿ ಇದ್ದ ಸಂದರ್ಭದಲ್ಲಿ ಎಲ್ಲ ವರ್ಗಗಳ ಕಲ್ಯಾಣ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗಿದ್ದು, ಇಂದಿಗೂ ಕೂಡ ಜನ ಇವುಗಳ ಬಗ್ಗೆ ಮಾತನಾಡುತ್ತಿದ್ದಾರೆ ಎಂದರು.
ಕಾಂಗ್ರೆಸ್ ಗೆಲ್ಲಲೇ ಬೇಕು ಎನ್ನುವ ಜಿದ್ದಿಗೆ ಬಿದ್ದಿದೆ. ಆದರೆ ಕಾಂಗ್ರೆಸ್ನ ಯಾವ ತಂತ್ರಗಾರಿಕೆಗಳೂ ಇಲ್ಲಿ ಫಲ ನೀಡುವುದಿಲ್ಲ. ಸಿ.ಎಂ.ಉದಾಸಿ ಅವರು ಶಾಸಕ, ಸಚಿವರಿದ್ದಾಗ ಕ್ಷೇತ್ರದ ಕಲ್ಯಾಣಕ್ಕೆ ಸಾಕಷ್ಟು ಅನುದಾನ ತಂದಿದ್ದಾರೆ. ಅವರ ಪುತ್ರ 3 ಬಾರಿ ಸಂಸದರಾಗಿರುವ ಶಿವಕುಮಾರ ಉದಾಸಿ ಅವರೂ ಸಹ ಕ್ಷೇತ್ರದ ಅಭಿವೃದ್ಧಿಗೆ ದುಡಿದಿದ್ದಾರೆ. ನಮ್ಮ ಅಭ್ಯರ್ಥಿ ಶಿವರಾಜ ಸಜ್ಜನರ ಅವರು ಉದಾಸಿ ಅವರಂತೆ ಅಭಿವೃದ್ಧಿ ಕಾರ್ಯಗಳನ್ನು ಮುಂದುವರೆಸಿಕೊಂಡು ಹೋಗಲು ಸಮರ್ಥರಿದ್ದು, ಗೆಲ್ಲುವ ಪೂರ್ಣ ವಿಶ್ವಾಸವಿದೆ ಎಂದರು.