ಹಾವೇರಿ: ‘ವಿವಿಧ ಬೇಡಿಕೆಗಳನ್ನು ಈಡೇರಿಸುವವರೆಗೆ ಸಂಗೂರಿನ ಸಕ್ಕರೆ ಕಾರ್ಖಾನೆ ಗುತ್ತಿಗೆದಾರರ ವಿರುದ್ಧ ಹೋರಾಟ ಮುಂದುವರಿಸುತ್ತೇವೆ. ಕಾರ್ಖಾನೆ ಮುಂಭಾಗ ಮುಷ್ಕರ ನಡೆಸುತ್ತೇವೆ’ ಎಂದು ಅಖಿಲ ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಸಮಿತಿ ಅಧ್ಯಕ್ಷ ಬಸಪ್ಪ ಚನ್ನಬಸಪ್ಪ ನೆಗಳೂರ ಹೇಳಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಗುತ್ತಿಗೆದಾರರಾದ ಜಿ.ಎಂ.ಶುಗರ್ಸ್ ಮತ್ತು ಎನರ್ಜಿ ಸಂಸ್ಥೆಯ ದುರಾಡಳಿತ ವಿರುದ್ಧ ಪ್ರತಿಭಟನೆಯನ್ನು ನ್ಯಾಯ ಸಿಗುವವರೆಗೆ ನಿರಂತರವಾಗಿ ಮಾಡುತ್ತೇವೆ. 2019–20ನೇ ಸಾಲಿನಲ್ಲಿ ಕಬ್ಬು ಸರಬರಾಜು ಮಾಡಿದ ರೈತರಿಗೆ ದರ ನಿಗದಿಪಡಿಸಿರುವುದಿಲ್ಲ. 2016–17ನೇ ಸಾಲಿನಲ್ಲಿ ಕಬ್ಬು ಸರಬರಾಜು ಮಾಡಿದ ರೈತರಿಗೆ ಪ್ರತಿ ಟನ್ಗೆ ₹130 ಪಾವತಿಸಿರುವುದಿಲ್ಲ ಎಂದು ದೂರಿದರು.
ಕಾರ್ಖಾನೆ ಸ್ಥಾಪನೆ ಸಮಯದಲ್ಲಿ ಜಮೀನು ಕಳೆದುಕೊಂಡವರ ಮಕ್ಕಳನ್ನು ಕೆಲಸದಿಂದ ತೆಗೆದು ಹಾಕಿರುವುದು ಹಾಗೂ ಕೆಲವು ನೌಕರರನ್ನು ದುರುದ್ದೇಶದಿಂದ ಕೆಲಸದಿಂದ ತೆಗೆದು ಹಾಕುರುವುದು ಹಾಗೂ ರೈತರಿಗೆ, ಕಾರ್ಮಿಕರಿಗೆ ಗುತ್ತಿಗೆದಾರರು ಅನಗತ್ಯ ಕಿರುಕುಳ ಕೊಡುತ್ತಿದ್ದಾರೆ. 2020–21ನೇ ಸಾಲಿನಲ್ಲಿ ಕಬ್ಬು ನುರಿಸುವ ಹಂಗಾಮಿಗೆ ಕಬ್ಬಿನ ದರ ನಿಗದಿಪಡಿಸಿದ ನಂತರ ಕಾರ್ಖಾನೆ ಪ್ರಾರಂಭ ಮಾಡಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಸಮಿತಿಯ ಉಪಾಧ್ಯಕ್ಷ ಶಂಕರಗೌಡ ಬಸನಗೌಡ ಸುಂಕದ, ಪ್ರಧಾನ ಕಾರ್ಯದರ್ಶಿ ಮಂಜಪ್ಪ ಚನ್ನಬಸಪ್ಪ ಪುಟ್ಟಣ್ಣನವರ, ಕಾರ್ಯದರ್ಶಿ ಲೋಹಿತಪ್ಪ ಹೊಂಕಳದ, ಸಂಘಟನಾ ಕಾರ್ಯದರ್ಶಿ ಮಲ್ಲೇಶಪ್ಪ ಹೋತನಹಳ್ಳಿ, ಕುಳೇನೂರಿನ ಅಂಬೇಡ್ಕರ್ ಸಂಘದ ಗುಡ್ಡಪ್ಪ ಯಲ್ಲಪ್ಪ ನೆಲ್ಲೂರ ಮತ್ತು ಪದಾಧಿಕಾರಿಗಳು ಇದ್ದರು.