ಹಾವೇರಿ: ಎಲ್ಲ ಸಂಪತ್ತುಗಳಿಗಿಂತ ಆರೋಗ್ಯ ಸಂಪತ್ತು ಶ್ರೇಷ್ಠವಾದುದು. ಹಾಗಾಗಿ ಶಿಸ್ತು ಮತ್ತು ಸ್ವಚ್ಛತೆ ಕಾಪಾಡಿಕೊಳ್ಳುವ ಮೂಲಕ ಜಗತ್ತನ್ನು ತಲ್ಲಣಗೊಳಿಸಿರುವ ಕೊರೊನಾ ಸೋಂಕನ್ನು ತಡೆಗಟ್ಟಲು ಪ್ರತಿಯೊಬ್ಬರೂ ಸಂಕಲ್ಪ ಕೈಗೊಳ್ಳಿ ಎಂದು ನಗರದ ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಕರೆ ನೀಡಿದ್ದಾರೆ.
ದೇಶದೆಲ್ಲೆಡೆ ವ್ಯಾಪಕವಾಗಿ ಹಬ್ಬುತ್ತಿರುವ ಕೊರೊನಾ ಸೋಂಕನ್ನು ತಡೆಗಟ್ಟಲು ಕೆಲವು ನಿಬಂಧನೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿಗೆ ತಂದಿದೆ. ಆ ನಿಬಂಧನೆಗಳನ್ನು ಯಾರೂ ಕೂಡ ಉಲ್ಲಂಘನೆ ಮಾಡಬಾರದು.ನಮಗೋಸ್ಕರ, ನಮ್ಮೆಲ್ಲರಿಗೋಸ್ಕರ ನಿಯಮಗಳನ್ನು ಪಾಲಿಸೋಣ ಎಂದು ತಿಳಿ ಹೇಳಿದ್ದಾರೆ.
ಕೋವಿಡ್–19ನಿಂದ ಜಗತ್ತಿನಾದ್ಯಂತ ಸಾವಿರಾರು ಜನರು ಮೃತಪಟ್ಟಿದ್ದಾರೆ. ಆ ದೃಷ್ಟಿಯಿಂದ ನಮಗೆ ನಾವೇ ನಿಬಂಧನೆಗಳನ್ನು ಹಾಕಿಕೊಳ್ಳಬೇಕು. ಮನೆಯಿಂದ ಯಾರೂ ಅನಗತ್ಯವಾಗಿ ಹೊರಗಡೆ ಹೋಗುವುದಿಲ್ಲ. ಮನೆಯಲ್ಲೇ ಇದ್ದು ಕೊರೊನಾ ಸೋಂಕು ತಡೆಗಟ್ಟುತ್ತೇವೆ ಎಂಬ ಸಂಕಲ್ಪ ಮಾಡಿಕೊಳ್ಳಬೇಕು. ಯಾವುದೇ ವಸ್ತುವನ್ನು ಮುಟ್ಟಿದಾಗ ಸಾಬೂನಿನಿಂದ ಕೈ ತೊಳೆದುಕೊಳ್ಳಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಕೊರೊನಾ ಸೋಂಕಿನ ಗುಣಲಕ್ಷಣಗಳು ಕಂಡು ಬಂದಾಗ ತಕ್ಷಣ ಸ್ಥಳೀಯ ಆಸ್ಪತ್ರೆಗೆ ಹೋಗಿ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.