ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಕರಿ, ಮಟನ್ ಶಾಪ್ ತೆರೆಯಲು ಕ್ರಮ: ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ

ಪಡಿತರ ಹಾಗೂ ಉಜ್ವಲ ಸಿಲಿಂಡರ್‌ ತ್ವರಿತ ವಿತರಣೆ ಕ್ರಮ
Last Updated 7 ಏಪ್ರಿಲ್ 2020, 13:39 IST
ಅಕ್ಷರ ಗಾತ್ರ

ಹಾವೇರಿ: ಕೊರೊನಾಸೋಂಕು ಹರಡದಂತೆ ಆರೋಗ್ಯ ಇಲಾಖೆಯ ಸುರಕ್ಷತಾ ಮಾನದಂಡ ಅಳವಡಿಸಿಕೊಂಡು ಜಿಲ್ಲೆಯ ಬೇಕರಿ, ಚಿಕನ್, ಮೀನು ಮತ್ತು ಮಟನ್ ಶಾಪ್‍ಗಳನ್ನು ತೆರೆಯಲು ಅಗತ್ಯ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ಟಾಸ್ಕ್‌ಫೋರ್ಸ್‌ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಜಿಲ್ಲೆಯ ಅಗತ್ಯ ವಸ್ತುಗಳ ಪೂರೈಕೆ ಸರಪಳಿ ಕುರಿತಂತೆ ಪರಿಶೀಲನೆ ನಡೆಸಿದರು.

ಮೀನು, ಚಿಕನ್ ಹಾಗೂ ಮಟನ್ ಮಾರಾಟಕ್ಕೆ ಯಾವುದೇ ನಿರ್ಬಂಧವಿರುವುದಿಲ್ಲ. ಆದರೆ ಪ್ರತಿ ಅಂಗಡಿಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಸ್ವಚ್ಛತೆ ನಿರ್ವಹಣೆ ಮಾಡಬೇಕು. ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ನಗರ ಪ್ರದೇಶದಲ್ಲಿ ಆಯ್ದ ಅಂಗಡಿಗಳನ್ನು ಗುರುತಿಸಿ ಮಾರಾಟಕ್ಕೆ ಕ್ರಮ ಕೈಗೊಳ್ಳುವಂತೆ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರಿಗೆ ಸೂಚನೆ ನೀಡಿದರು.

ಟೀ, ಕಾಫಿ ಮಾರಾಟಕ್ಕೆ ನಿರ್ಬಂಧ:ಬೇಕರಿ ತಿನಿಸುಗಳ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಿ. ಆದರೆ ಬೇಕರಿಯಲ್ಲಿ ಟೀ, ಕಾಫಿ ಮಾರಾಟ ಮಾಡುವ ಹಾಗಿಲ್ಲ. ಬೇಕರಿಗಳಲ್ಲಿ ಕುಳಿತು ತಿನಿಸುಗಳನ್ನು ತಿನ್ನಲು ಅವಕಾಶ ನೀಡದೇ ಬೇಕರಿ ತಿನಿಸುಗಳನ್ನು ಪಾರ್ಸಲ್ ಮೂಲಕ ಕೊಂಡೊಯ್ಯಲು ಅವಕಾಶ ಕಲ್ಪಿಸಬೇಕು. ಹಳೆಯ ದಾಸ್ತಾನುಗಳನ್ನು ಮಾರಾಟ ಮಾಡದಂತೆ ಕ್ರಮವಹಿಸಿ ಎಂದರು.

ಜಿಲ್ಲೆಯಲ್ಲಿ ಅಕ್ಕಿ, ಸಕ್ಕರೆ, ಅಡುಗೆ ಎಣ್ಣೆ ಸೇರಿದಂತೆ ಬೇಡಿಕೆಯ ವಿವರ, ದಾಸ್ತಾನುಗಳ ವಿವರವನ್ನು ನಿತ್ಯ ಪರಿಶೀಲನೆ ನಡೆಸಬೇಕು. ದಿನಸಿಗಳ ಕೊರತೆಯಾಗದಂತೆ ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ದಾಸ್ತಾನು ತರಿಸಿಕೊಳ್ಳಬೇಕು ಹಾಗೂ ಮಾರಾಟಗಾರರು ಅಕ್ರಮವಾಗಿ ದಾಸ್ತಾನು ಮಾಡಿಕೊಂಡು ಕೃತಕ ಅಭಾವ ಸೃಷ್ಟಿಸಿ ಹೆಚ್ಚು ಬೆಲೆಗೆ ಮಾರಾಟ ಮಾಡದಂತೆ ತೀವ್ರ ನಿಗಾವಹಿಸಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕರಿಗೆ ಸೂಚನೆ ನೀಡಿದರು.

ಸಹಿ ಪಡೆದು ಪಡಿತರ ವಿತರಿಸಿ:ಪಡಿತರ ಪದಾರ್ಥಗಳನ್ನು ಕಾರ್ಡುದಾರರಿಗೆ ಯಾವುದೇ ಗೊಂದಲವಿಲ್ಲದಂತೆ ವಿತರಣೆ ಮಾಡಬೇಕು. ಒಂದೊಮ್ಮೆ ಆನ್‍ಲೈನ್ ವ್ಯವಸ್ಥೆಯಲ್ಲಿ ವ್ಯತ್ಯಾಸವಾಗಿದ್ದರೂ ರುಜು ಪಡೆದು ಪಡಿತರ ವಿತರಣೆಗೆ ಕ್ರಮವಹಿಸಬೇಕು. ಗ್ಯಾಸ್ ಸಿಲಿಂಡರ್‌ ಹಣವನ್ನು ಫಲಾನುಭವಿಗಳ ಖಾತೆಗೆ ಸರ್ಕಾರ ಮುಂಗಡವಾಗಿ ಜಮಾ ಮಾಡಲಿದೆ. ಈ ಹಣವನ್ನು ಡ್ರಾ ಮಾಡಿ ಸಿಲಿಂಡರ್‌ ವಿತರಕರಿಗೆ ಪಾವತಿಸಿ ಸಿಲಿಂಡರ್‌ ಪಡೆಯಬೇಕಾಗಿದೆ ಎಂದು ಸೂಚನೆ ನೀಡಿದರು.

ಬೀಜ-ಗೊಬ್ಬರ ಅಂಗಡಿಗಳು ಎಂದಿನಂತೆ ತೆರೆದಿರಲಿ. ರೈತರು ಬೇಕಾದ ಸಂದರ್ಭದಲ್ಲಿ ಖರೀದಿಸುವ ಅವಕಾಶವಿರಬೇಕು. ರೈತರ ಬೇಡಿಕೆಗೆ ಅನುಸಾರವಾಗಿ ಬಿತ್ತನೆ ಬೀಜ ಮತ್ತು ಗೊಬ್ಬರಗಳನ್ನು ದಾಸ್ತಾನು ಮಾಡಿಕೊಳ್ಳಬೇಕು. ಮಾರಾಟಗಾರರಿಗೆ ಅಗತ್ಯ ಪಾಸ್‍ಗಳನ್ನು ವಿತರಿಸುವಂತೆ ಕೃಷಿ ಜಂಟಿ ನಿರ್ದೇಶಕರಿಗೆ ಸೂಚನೆ ನೀಡಿದರು.

ಪ್ರಧಾನ ಮಂತ್ರಿ ಕೃಷಿ ಸಮ್ಮಾನ್ ಯೋಜನೆಯಡಿ ರೈತರಿಗೆ ಸಕಾಲದಲ್ಲಿ ಹಣ ಜಮಾವಣೆಗೆ ಕ್ರಮವಹಿಸಬೇಕು. ಒಂದು ವಾರದಲ್ಲಿ ಹಣ ಜಮಾವಣೆಯಾಗುವಂತೆ ಕ್ರಮವಹಿಸಬೇಕು ಎಂದು ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಿಇಒ ರಮೇಶ ದೇಸಾಯಿ, ಹೆಚ್ಚುವರಿ ಜಿಲ್ಲಾಧಿಕಾರಿ ಯೋಗೇಶ್ವರ, ಹಾವೇರಿ ಉಪವಿಭಾಗಾಧಿಕಾರಿ ಡಾ.ದಿಲೀಷ್ ಶಶಿ, ಸವಣೂರು ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ, ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT