ರಾಣೆಬೆನ್ನೂರು: 2019–20ನೇ ಸಾಲಿನಲ್ಲಿ ಪ್ರಕೃತಿ ವಿಕೋಪ ಪರಿಹಾರದಡಿ ಕಳಪೆ ಕಾಮಗಾರಿ ಮತ್ತು ಅಪೂರ್ಣ ಕಾಮಗಾರಿ ಮಾಡಿಸಿ ₹20 ಕೋಟಿ ಅನುದಾನದ ನಕಲಿ ಬಿಲ್ ತಯಾರಿಸಲಾಗಿದೆ ಎಂದು ಆರೋಪಿಸಿ, ನಗರದ ಕೆ.ಆರ್.ಐ.ಡಿ.ಬಿ.ಎಲ್ ಕಚೇರಿ ಮುಂದೆ ಬುಧವಾರ ರೈತ ಸಂಘದ ಪದಾಧಿಕಾರಿಗಳು ಮತ್ತು ಮಹಿಳೆಯರು ಪ್ರತಿಭಟನೆ ನಡೆಸಿದರು.
ಭ್ರಷ್ಟಾಚಾರದ ಬಗ್ಗೆ ಜಿಲ್ಲಾಡಳಿತ ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಉಪತಹಶೀಲ್ದಾರ್ ಮಂಜುನಾಥ ಹಾದಿಮನಿ ಅವರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ರೈತ ಮುಖಂಡ ರವೀಂದ್ರಗೌಡ ಪಾಟೀಲ ಮಾತನಾಡಿ, ‘ಲಾಕ್ಡೌನ್ ಅವಧಿಯಲ್ಲಿ ಕೆ.ಆರ್.ಐ.ಡಿ.ಬಿ.ಎಲ್ (ಲ್ಯಾಂಡ್ ಆರ್ಮಿ) ವಿವಿಧ ಗ್ರಾಮಗಳಲ್ಲಿ ಕೈಗೊಂಡ ಕಾಮಗಾರಿ ಬಗ್ಗೆ ಮಾಹಿತಿ ಪಡೆಯಲಾಗಿದ್ದು, ಅವೆಲ್ಲವೂ ಕಳಪೆಯಾಗಿವೆ. ಜತೆಗೆ ಅಧಿಕಾರಿಗಳು ನಕಲಿ ಬಿಲ್ ತಯಾರಿಸಿದ್ದಾರೆ. ಹೀಗಾಗಿ ಸರ್ಕಾರ ಒಬ್ಬ ದಕ್ಷ ಅಧಿಕಾರಿಯನ್ನು ನೇಮಿಸಿ ತನಿಖೆ ಮಾಡಿಸಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಒಂದು ವಾರದೊಳಗೆ ತನಿಖೆಯನ್ನು ಚುರುಕುಗೊಳಿಸದಿದ್ದರೆ ಅ.19ರಂದು ಕೆಆರ್ಐಡಿಬಿಎಲ್ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕೆಆರ್ಐಡಿಬಿಎಲ್ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ರುದ್ರೇಶ ಹಾಗೂ ಮಹೇಂದ್ರಕರ ಅವರನ್ನು ಪ್ರತಿಭಟನಾಕಾರರು ತರಾಟೆಗೆ ತೆಗೆದುಕೊಂಡರು.