ಹಾವೇರಿ: ತಾಲ್ಲೂಕಿನ ದೇವಗರಿ ಗ್ರಾಮದಲ್ಲಿರುವ ಮದ್ಯದಂಗಡಿ ಸ್ಥಳಾಂತರಕ್ಕೆ ಆಗ್ರಹಿಸಿ ಹಸಿರು ಸೇನೆ ಮತ್ತು ರೈತ ಸಂಘಟನೆ ಗ್ರಾಮ ಘಟಕದ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯ ಮುಂದಾಳತ್ವ ವಹಿಸಿದ್ದ ಶೇಖಪ್ಪ ಹಲಸೂರ ಮಾತನಾಡಿ,ಗ್ರಾಮದ ಮಧ್ಯಭಾಗದಲ್ಲಿರುವ ಮದ್ಯದಂಗಡಿಯಿಂದ ಗ್ರಾಮಸ್ಥರ ವಾಹನ ಓಡಾಟಕ್ಕೆ ತೊಂದರೆಯಾಗುತ್ತಿದೆ. ಸಂಜೆಯಾಗುತ್ತಿದ್ದಂತೆ ಕುಡುಕರ ಹಾವಳಿ ಹೆಚ್ಚಾಗುತ್ತಿದೆ. ಮಹಿಳೆಯರು ರಸ್ತೆಯಲ್ಲಿ ಓಡಾಡಲು ಭಯಪಡುತ್ತಿದ್ದು, ಕೆಲ ಕಿಡಿಗೇಡಿಗಳು ಕುಡಿತದ ಅಮಲಿನಲ್ಲಿ ಅಸಭ್ಯವಾಗಿ ವರ್ತನೆ ಮಾಡಿರುವ ಘಟನೆಗಳು ಸಹ ಜರಗುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದಲ್ಲಿರುವ ಮದ್ಯದಂಗಡಿಯನ್ನು ಗ್ರಾಮದ ಹೊರವಲಯಕ್ಕೆ ಶೀಘ್ರವಾಗಿ ಸ್ಥಳಾಂತರಿಸಿ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು. ನಂತರ ಗ್ರಾಮ ಪಂಚಾಯತಿಗೆ ತೆರಳಿ ಪಿ.ಡಿ.ಒ ಸುನಿತಾ ಗರಡಿ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ತಾಲ್ಲೂಕು ಘಟಕದ ಅಧ್ಯಕ್ಷ ರಾಜು ತರ್ಲಘಟ್ಟ, ಎಂ.ಎನ್.ನಾಯಕ್, ಗುಡ್ಡಪ್ಪ ಬಾರ್ಕಿ, ವೀರಣ್ಣ ಗಾಣಿಗೇರ, ರಾಮಣ್ಣ ಬಸಾಪುರ, ಬಸವರಾಜ ಮುಂದಿನಮನಿ, ರುದ್ರಗೌಡ, ಬಸವರಾಜ ಕಟ್ಟೀಮನಿ ಇದ್ದರು.