ಹಾವೇರಿ: ಶಿಗ್ಗಾವಿ ತಾಲ್ಲೂಕಿನಬಂಕಾಪುರ ಪುರಸಭೆಯಲ್ಲಿ ಆ.15ರಂದು ಆಚರಿಸಿದ 75ನೇ ಸ್ವಾತಂತ್ರೋತ್ಸವ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಬಂಕಾಪುರ ಪುರಸಭೆ ಮುಖ್ಯಾಧಿಕಾರಿ ರೇಣುಕಾ ದೇಸಾಯಿ ಅವರು ಮಾದರ ಸಮುದಾಯದವರಿಗೆ ಅವಮಾನ ಮಾಡಿದ್ದು, ಅವರನ್ನು ಸೇವೆಯಿಂದ ಅಮಾನತು ಮಾಡುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯ (ಪ್ರೊ.ಬಿ.ಕೃಷ್ಣಪ್ಪ ಬಣ) ಶಿಗ್ಗಾವಿ ತಾಲ್ಲೂಕು ಸಂಚಾಲಕ ಬಸವರಾಜ ಕಟ್ಟಿಮನಿ ಆಗ್ರಹಿಸಿದ್ದಾರೆ.
ಬಂಕಾಪುರ ಪುರಸಭೆಯಲ್ಲಿ 35ಕ್ಕೂ ಹೆಚ್ಚು ಪೌರಕಾರ್ಮಿಕರಿದ್ದಾರೆ. 75ನೇ ಸ್ವಾತಂತ್ರೋತ್ಸವ ಅಮೃತ ಮಹೋತ್ಸವ ಕಾರ್ಯಕ್ರಮ ಸಮಾರಂಭದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಮಾದರ ಸಮಾಜದವರನ್ನು ಕೈ ಬಿಟ್ಟು ಮುಂದುವರಿದ ಎಲ್ಲಾ ಜಾತಿಯ 75 ಜನರಿಗೆ ವಿಶೇಷ ಸನ್ಮಾನ ಕಾರ್ಯ ಮಾಡುವ ಮೂಲಕ ತಾರತಮ್ಯ ಮಾಡಿದ್ದಾರೆ ಎಂದು ದೂರಿದರು.
ಈ ಪ್ರಮಾಣದವನ್ನು ಗಂಭೀರವಾಗಿ ಪರಿಗಣಿಸಿ, ಪುರಸಭೆ ಮುಖ್ಯಾಧಿಕಾರಿಯವರನ್ನು ಅಮಾನತುಗೊಳಿಸಬೇಕು. ಒಂದು ವೇಳೆ ಕ್ರಮ ಜರುಗಿಸದೇ ಇದ್ದಲ್ಲಿ ದಲಿತ ಸಂಘಟನೆಗಳು ಸೇರಿ ಉಗ್ರ ಹೋರಾಟ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಡಿಎಸ್ಎಸ್ ರಾಜ್ಯ ಸಂಘಟನಾ ಸಂಚಾಲಕ ಹೊನ್ನೇಶ್ವರ ತಗಡಿನಮನಿ, ಜಿಲ್ಲಾ ಸಂಚಾಲಕ ಶ್ರೀಕಾಂತ ಗಡ್ಡಿ, ಸುರೇಶ ಹರಿಜನ, ಈಶ್ವರ ಬಡಿಗೇರ, ವೀರೇಶ ಹೊಂಬರಡಿ, ಸಚಿನ ಮರೆಣ್ಣನವರ ಇದ್ದರು.