ಹಾವೇರಿ: ಆನೆಗೊಂದಿ ಉತ್ಸವದಲ್ಲಿ ಸಿಎಎ ವಿರೋಧಿ ಕವನ ವಾಚಿಸಿ, ಪ್ರಧಾನಿ ಮೋದಿ ಅವರನ್ನು ಅವಹೇಳನ ಮಾಡಿದ್ದಾರೆ ಎಂಬ ಆರೋಪದ ಮೇಲೆ ಸಾಹಿತಿ ಸಿರಾಜ್ ಬಿಸರಳ್ಳಿ ಮತ್ತು ರಾಜಾಭಕ್ಷಿ ಅವರನ್ನುಪೊಲೀಸ್ ಕಸ್ಟಡಿಗೆ ನೀಡಿರುವುದು ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಕಸಿದುಕೊಂಡಂತಾಗಿದೆ ಎಂದು ಹಾವೇರಿಯ ಪ್ರಗತಿಪರ ಸಂಘಟನೆಗಳ ಒಕ್ಕೂಟ ಆಕ್ರೋಶ ವ್ಯಕ್ತಪಡಿಸಿತು.
ಬಂಧಿಸಿದ ಕವಿ ಮತ್ತು ಪತ್ರಕರ್ತರನ್ನು ಕೂಡಲೇ ಬಿಡುಗಡೆ ಮಾಡಬೇಕು. ಅವರ ಮೇಲಿನ ಪ್ರಕರಣವನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿ ಒಕ್ಕೂಟದಿಂದ ಹೆಚ್ಚುವರಿ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಡಿವೈಎಫ್ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜ ಪೂಜಾರ ಮಾತನಾಡಿ, ಸಿರಾಜ್ ಬಿಸರಳ್ಳಿಯವರ ಕವನ ತೆಲುಗು, ತಮಿಳು ಸೇರಿದಂತೆ ಹತ್ತಾರು ಭಾಷೆಗಳಿಗೆ ಅನುವಾದಗೊಂಡಿದೆ. ಕವನ ಸಂಕಲನವೂ ಹೊರಬಿದ್ದಿತು. ಸರ್ಕಾರದ ನೀತಿಯನ್ನು ಟೀಕಿಸುವುದು ದೇಶದ್ರೋಹವಾಗುವುದಿಲ್ಲ ಎಂದು ಮುಂಬೈ ಹೈಕೋರ್ಟ್ ತೀರ್ಪು ನೀಡಿದೆ ಎಂದು ತಿಳಿಸಿದರು.
ಲಿಂಗತ್ವ ಅಲ್ಪಸಂಖ್ಯಾತರ ಸಂಘಟನೆ ರಾಜ್ಯ ಕಾರ್ಯದರ್ಶಿ ಅಕ್ಷತಾ ಕೆ.ಸಿ ಮಾತನಾಡಿ, ಕವಿಯೊಬ್ಬ ತನ್ನ ಅಭಿವ್ಯಕ್ತಿಯನ್ನು ಕನ್ನಡ ಕವನದ ಮೂಲಕ ವ್ಯಕ್ತಪಡಿಸಿದರೆ ಅದು ದೇಶದ್ರೋಹವೆಂದು ಪರಿಗಣಿಸಲಾಗಿದೆ. ಇದು ಕನ್ನಡ ಮತ್ತು ಕಾವ್ಯಕ್ಕೆ ಮಾಡುತ್ತಿರುವ ದ್ರೋಹ. ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು ಹೇಳಿದರು.
ಎಐಟಿಯುಸಿ ಜಿಲ್ಲಾ ಘಟಕದ ಅಧ್ಯಕ್ಷರಾದ ಹೊನ್ನಪ್ಪ ಮರೆಮ್ಮನವರ, ಸಿಐಟಿಯು ಜಿಲ್ಲಾ ಸಂಚಾಲಕ ವಿನಾಯಕ ಕುರುಬರ, ಡಿಎಸ್ಎಸ್ ಮುಖಂಡ ಹೊನ್ನೇಶ್ವರ ತಗಡಿನಮನಿ, ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ, ಎಸ್ಎಫ್ಐ ಸಹಕಾರ್ಯದರ್ಶಿ ಬಸವರಾಜ ಭೋವಿ, ವಿದ್ಯಾರ್ಥಿ ಮುಖಂಡರಾದ ಸಿದ್ದಲಿಗೇಶ ಮರೆಮ್ಮನವರ ಇದ್ದರು.