ಹಾನಗಲ್: ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ ಇದೇ ರೀತಿ ಮುಂದುವರೆಯಬೇಕು ಎಂಬ ಇಚ್ಛೆ ಇದ್ದರೆ ಮತದಾರರು ಬಿಜೆಪಿ ಅಭ್ಯರ್ಥಿಗೆ ಬೆಂಬಲಿಸಬೇಕು ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಹಾನಗಲ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಜೊತೆಯಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದೇನೆ. ಪಕ್ಷಕ್ಕೆ ಉತ್ತಮ ವಾತಾವರಣವಿದೆ. ಗೆಲ್ಲುವ ವಿಶ್ವಾಸವಿದೆ ಎಂದರು.
ರಾಹುಲ್ ಗಾಂಧಿ ಕುರಿತ ನಳೀನ್ಕುಮಾರ ಕಟೀಲ ಹೇಳಿಕೆಯಿಂದ ಕಾಂಗ್ರೆಸ್ ನಾಯಕರು ದಿಗಿಲುಗೊಂಡಿದ್ದಾರೆ. ಕಟೀಲ ಅವರ ಹೇಳಿಕೆಯನ್ನು ಕಾಂಗ್ರೆಸ್ಸಿಗರು ಅಲ್ಲಗಳೆದಿದ್ದರೆ ಸಾಕಾಗಿತ್ತು ಎಂದು ಹೇಳಿದರು.
ದೊಡ್ಡವರು ಏನೇನೋ ಹೇಳುತ್ತಾರೆ. ಆದರೆ ಸಂಘದಲ್ಲಿ ಏನು ಕಲಿಸುತ್ತಾರೆ ಎಂಬುದನ್ನು ತಿಳಿದುಕೊಳ್ಳಬೇಕಿತ್ತು. ದೇಶದಲ್ಲಿ ಬಿಜೆಪಿ ಪ್ರಮುಖ ನಾಯಕರ ನಡವಳಿಕೆಗಳಿಂದ ಸಂಘದಲ್ಲಿ ಕಲಿಸಲಾಗುವ ಸಂಸ್ಕೃತಿಯ ಪರಿಚಯ ಸಿಗುತ್ತದೆ ಎಂದು ಎಚ್ಡಿಕೆ ಹೇಳಿಕೆಗೆ ಕೋಟ ಪೂಜಾರಿ ತಿರುಗೇಟು ನೀಡಿದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ಧರಾಜ ಕಲಕೋಟಿ, ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ತಂಗಳೆ, ಮುಖಂಡ ನಾಗರಾಜ ಈಳಿಗೇರ ಇದ್ದರು.