ಹಾವೇರಿ: ಚಲಿಸುತ್ತಿದ್ದ ಬಸ್ ಇಳಿಯಲು ಹೋಗಿ ಮೃತಪಟ್ಟ ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ಮಾನಂಗಿ ತಾಂಡಾದ ಸುಮಿತ್ರಾ ಎಂ.ಆರ್. ಅವರ ತಾಯಿ ಕಮಲಾಬಾಯಿ ಅವರಿಗೆ ₹2.75 ಲಕ್ಷ ಚೆಕ್ ಅನ್ನು ಗುರುವಾರ ಹಾವೇರಿಯಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿ ವಿ.ಎಸ್. ಜಗದೀಶ ವಿತರಿಸಿದರು.
ವಾ.ಕ.ರ.ಸಾರಿಗೆ ಸಂಸ್ಥೆಯ ವಾಹನದಲ್ಲಿ ಪ್ರಯಾಣಿಸುತ್ತಿರುವ ಪ್ರಯಾಣಿಕರು ಮೃತಪಟ್ಟರೆ ₹3 ಲಕ್ಷ ಪರಿಹಾರ ಮೊತ್ತ ನೀಡುವ ನಿರ್ದೇಶನವಿದ್ದು, 2020ರ ಡಿ.4ರಂದು ಅಪಘಾತ ನಡೆದ ದಿನವೇ ಮಧ್ಯಂತರ ಪರಿಹಾರವೆಂದು ₹25 ಸಾವಿರವನ್ನು ಮೃತರ ವಾರಸುದಾರರಿಗೆ ನೀಡಲಾಗಿತ್ತು.
ಚೆಕ್ ವಿತರಣೆ ಸಂದರ್ಭದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿ ಅಶೋಕ ಆರ್. ಪಾಟೀಲ, ಉಪಮುಖ್ಯ ಭದ್ರತಾ ಮತ್ತು ಜಾಗೃತಾಧಿಕಾರಿ ಜಗದೀಶ್ ವಿ.ಎಚ್. ಹಾಗೂ ಸಹಾಯಕ ಲೆಕ್ಕ ಪತ್ರ ಅಧಿಕಾರಿ (ಪ್ರ) ಎನ್.ಬಿ. ದೊರಳ್ಳಿ ಇದ್ದರು.